

ಶ್ರೇಯಸ್ ಅಯ್ಯರ್ ನಾಯಕರಾದ ಬಳಿಕ ಆಡಿರುವ ಐದು ಟಿ20ಐ ಪಂದ್ಯಗಳಲ್ಲಿ ಸತತ ಸೋಲಿಗೆ ಕಾರಮವಾದ ಟೀಂ ಇಂಡಿಯಾದ ಬ್ಯಾಟಿಂಗ್ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐನಲ್ಲಿ ಭಾರತ 20 ಓವರ್ಗಳಲ್ಲಿ ಕೇವಲ 158 ರನ್ ಗಳಿಸಿತು. ನಾಯಕ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್ಮನ್ ಕೂಡ 25 ರನ್ ಗಳಿಸಲು ಕೂಡ ಸಾಧ್ಯವಾಗಲಿಲ್ಲ. ಗೌತಮ್ ಗಂಭೀರ್ ನೇತೃತ್ವದ ಭಾರತ ತಂಡದ ಆಡಳಿತ ಮಂಡಳಿಯು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟ ನಿರ್ಧಾರದ ಬಗ್ಗೆ ಮತ್ತೊಮ್ಮೆ ಪ್ರಶ್ನಾರ್ಥಕ ಚಿಹ್ನೆಗಳು ಎದ್ದಿವೆ. 15 ವರ್ಷದ ವೈಭವ್ ಸೂರ್ಯವಂಶಿಗಾಗಿ ಸ್ಯಾಮ್ಸನ್ ಅವರನ್ನು ಕೈಬಿಡುವಲ್ಲಿ ತಂಡವು 'ಭಾವನಾತ್ಮಕ' ನಿರ್ಧಾರ ಕೈಗೊಂಡಿತೇ ಎಂದು ಎಂದು ಭಾರತದ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಪ್ರಶ್ನಿಸಿದ್ದಾರೆ.
2026ರ ಟಿ20 ವಿಶ್ವಕಪ್ನಲ್ಲಿ ಭಾರತದ ಗೆಲುವಿನಲ್ಲಿ ಸಂಜು ಸ್ಯಾಮ್ಸನ್ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿದ್ದರು. ಆದರೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಕೇವಲ ಮೂರು ಪಂದ್ಯಗಳ ನಂತರ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿದ್ದು, ವೈಭವ್ ಸೂರ್ಯವಂಶಿ ಅವರಿಗೆ ಅವಕಾಶ ನೀಡಲಾಗಿದೆ.
ಸ್ಯಾಮ್ಸನ್ ತಾವು ಆಡಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದರೆ, ಭಾರತದ ಪರ ಆಡಿದ ತಮ್ಮ ಮೊದಲ ಮೂರು ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಕೂಡ 14, 13 ಮತ್ತು 15 ರನ್ ಗಳಿಸಿದ್ದಾರೆ.
ಆಡುವ ಹನ್ನೊಂದರ ಬಳಗದಿಂದ ಸ್ಯಾಮ್ಸನ್ ಅವರನ್ನು ಕೈಬಿಟ್ಟ ನಿರ್ಧಾರದ ಹಿಂದಿನ ತರ್ಕವನ್ನು ಪಾರ್ಥಿವ್ ಪ್ರಶ್ನಿಸಿದರು.
'ಯಾವಾಗಲೂ ಸಂಜು ಸ್ಯಾಮ್ಸನ್ ಅವರೇ ಏಕೆ ಅವಕಾಶ ಕಳೆದುಕೊಳ್ಳುತ್ತಾರೆ? ಸಂಜು ಸ್ಯಾಮ್ಸನ್ ಅವರ ಕಳೆದ 11-12 ವರ್ಷಗಳ ವೃತ್ತಿಜೀವನವನ್ನು ಗಮನಿಸಿದರೆ, ಅವರನ್ನು ಸದಾ ಕಾಡುವ ಪ್ರಶ್ನೆ ಎಂದರೆ ಅದು ಸ್ಥಿರತೆಯ ಕೊರತೆ. ವೇಗವಾಗಿ ರನ್ ಗಳಿಸದ ಆಟಗಾರ ಅಥವಾ ಸ್ಥಿರ ಪ್ರದರ್ಶನ ನೀಡದ ಆಟಗಾರ - ಇವರಲ್ಲಿ ಒಬ್ಬರನ್ನು ತಂಡದಿಂದ ಕೈಬಿಡಲಾಗುತ್ತದೆ' ಎಂದು ಪಾರ್ಥಿವ್ ಜಿಯೋ-ಹಾಟ್ಸ್ಟಾರ್ನಲ್ಲಿ ಮಾತನಾಡುತ್ತಾ ಹೇಳಿದರು.
'ಭಾವನೆ ಮತ್ತು ತರ್ಕ - ಇವೆರಡರ ಆಧಾರದ ಮೇಲೆ ಏಕಕಾಲದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಭಾವನಾತ್ಮಕವಾಗಿ ಹೇಳುವುದಾದರೆ, ಹೌದು, ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿದ್ದು ಸರಿಯಾದ ನಿರ್ಧಾರವೇ ಆಗಿತ್ತು. ಆದರೆ, ತರ್ಕದ ದೃಷ್ಟಿಯಿಂದ ನೋಡಿದರೆ, ಸಂಜು ಸ್ಯಾಮ್ಸನ್ ಅವರನ್ನು ಏಕೆ ಕೈಬಿಡಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾಗಿ, ಈ ನಿರ್ಧಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.
ಭಾರತ ತಂಡವು ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಮೊದಲ ಬಾರಿಗೆ ಸತತ ಎರಡು ಟಿ20ಐ ಸರಣಿಗಳನ್ನು ಸೋತಿದೆ. ಇಂಗ್ಲೆಂಡ್ ಸರಣಿಯಲ್ಲಿ ಒಂದೇ ಒಂದು ಪಂದ್ಯ ಬಾಕಿ ಇರುವಾಗ, ಸ್ಯಾಮ್ಸನ್ಗೆ ಮತ್ತೊಂದು ಅವಕಾಶ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.