'ಅದು ಫಾರ್ಮ್‌ಗೆ ಸಂಬಂಧಿಸಿದ್ದಲ್ಲ': ವೈಭವ್ ಸೂರ್ಯವಂಶಿ ಕೈಬಿಟ್ಟಿದ್ದರ ಅಸಲಿ ಕಾರಣ ತಿಳಿಸಿದ ಶ್ರೇಯಸ್ ಅಯ್ಯರ್!

ಇಂಗ್ಲೆಂಡ್‌ಗೆ ಬಂದು ಸರಣಿಯನ್ನು ಗೆಲ್ಲಬಹುದು ಎಂಬ ಮನಸ್ಥಿತಿಯನ್ನು ಮಾತ್ರ ಹೊಂದಿದ್ದರೆ ಸಾಲದು. ಕಠಿಣ ಪರಿಶ್ರಮ ಪಡಬೇಕು ಮತ್ತು ಏಕಾಗ್ರತೆಯಿಂದ ಇರಬೇಕು; ತಂಡವಾಗಿ ನಾವು ಹಾಗೆಯೇ ಇದ್ದೆವು ಎಂದರು.
Shreyas Iyer in press conference
Photo | BCCI
Updated on

ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟಿ20ಐ ಪಂದ್ಯಕ್ಕೆ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟು ಮತ್ತೆ ಅನುಭವಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಯಿತು. ಈ ನಿರ್ಧಾರವನ್ನು ಅನೇಕ ಅಭಿಮಾನಿಗಳು 'ಕಠಿಣ' ಎಂದು ಕರೆದರು ಮತ್ತು ಕೆಲವರು ಇದು ಸೂರ್ಯವಂಶಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು ಎಂದು ಸೂಚಿಸಿದರು. ಆದಾಗ್ಯೂ, 15 ವರ್ಷದ ವೈಭವ್ ಸೂರ್ಯವಂಶಿಯನ್ನು ಫಾರ್ಮ್‌ ಬಗೆಗಿನ ಕಳವಳದಿಂದಾಗಿ ಬೆಂಚ್‌ನಲ್ಲಿ ಕೂರಿಸಿಲ್ಲ, ಬದಲಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿನ ನಿರ್ವಹಣೆಯ ತಂತ್ರದಿಂದಾಗಿ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಭಾರತದ ನಾಯಕ ಶ್ರೇಯಸ್ ಅಯ್ಯರ್ ಈಗ ಬಹಿರಂಗಪಡಿಸಿದ್ದಾರೆ.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭಿಕ ಹಂತದಲ್ಲಿ ಎಡಗೈ ಮತ್ತು ಬಲಗೈ ಬ್ಯಾಟರ್‌ಗಳ ಜೋಡಿಯನ್ನು ಕಣಕ್ಕಿಳಿಸಲು ತಂಡದ ಆಡಳಿತ ಮಂಡಳಿ ನಿರ್ಧರಿಸಿತ್ತು. ಹೀಗಾಗಿ, ಸೂರ್ಯವಂಶಿ ಅವರ ಬದಲಿಗೆ ಸ್ಯಾಮ್ಸನ್ ಅವರನ್ನು ಆಡಿಸಬೇಕಾಯಿತು ಎಂದು ತಿಳಿಸಿದರು.

'ಈ ಪರಿಸ್ಥಿತಿಗೆ ಸೂಕ್ತವಾಗುವಂತಹ ಅತ್ಯುತ್ತಮ ಸಂಯೋಜನೆಯನ್ನು ನಾವು ಪ್ರಯತ್ನಿಸಬೇಕಿತ್ತು. ಅಲ್ಲದೆ, ಅಭಿಷೇಕ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲು ನಮಗೆ ಬಲಗೈ ಬ್ಯಾಟರ್ ಒಬ್ಬರ ಅಗತ್ಯವಿತ್ತು; ಇದೂ ಕೂಡ ಒಂದು ಪ್ರಮುಖ ಕಾರಣವಾಗಿತ್ತು' ಎಂದರು.

ಆಡುವ ಹನ್ನೊಂದರ ಬಳಗಕ್ಕೆ ಸ್ಯಾಮ್ಸನ್ ಮರಳುವಿಕೆಯ ಕುರಿತು ಕೇಳಿದಾಗ, 'ನಾನು ಮೊದಲೇ ಹೇಳಿದಂತೆ, ಈ ನಿರ್ದಿಷ್ಟ ಪಂದ್ಯಕ್ಕೆ ಸೂಕ್ತವಾಗುವಂತಹ ವಿಭಿನ್ನ ಸಂಯೋಜನೆಯನ್ನು ನಾವು ಪ್ರಯತ್ನಿಸಲು ಬಯಸಿದ್ದೆವು. ಜೊತೆಗೆ, ಅವರು (ಸ್ಯಾಮ್ಸನ್) ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ; ಹಿಂದೆ ಅವರು ನಮಗಾಗಿ ಅನೇಕ ಸರಣಿಗಳನ್ನು ಗೆದ್ದುಕೊಟ್ಟಿದ್ದಾರೆ' ಎಂದು ಶ್ರೇಯಸ್ ಸೇರಿಸಿದರು.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳು ಭಾರತೀಯ ತಂಡಕ್ಕೆ ಸಾಕಷ್ಟು ಕಠಿಣವಾಗಿದ್ದವು; ಈ ಸರಣಿಗಳಲ್ಲಿ ಭಾರತ ತಂಡವು ಒಂದೇ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. ಈ ವೈಫಲ್ಯಕ್ಕೆ ಕಾರಣಗಳೇನು ಎಂದು ಕೇಳಿದಾಗ, ಇದಕ್ಕೆ ಒಂದೇ ನಿರ್ದಿಷ್ಟ ಕಾರಣವಿಲ್ಲ. ಬದಲಾಗಿ ತಂಡವು ಎದುರಿಸಿದ ಹಲವು ಸವಾಲುಗಳಿದ್ದವು. ವಿಶೇಷವಾಗಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ವಿಷಯದಲ್ಲಿ ಸಮಸ್ಯೆಯಾಯಿತು. ಇದರ ಒಟ್ಟು ಪರಿಣಾಮವೇ ಇದಕ್ಕೆ ಕಾರಣವೆಂದೂ ಹೇಳಿದರು.

Shreyas Iyer in press conference
'ಅವರು ನಡೆದುಕೊಂಡು ಬಂದ ರೀತಿಯನ್ನು ನೀವು ಗಮನಿಸಿದಿರಾ?': ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಪ್ರಶ್ನೆ

'ವಾಸ್ತವವಾಗಿ, ನಿರ್ದಿಷ್ಟವಾದ ಒಂದು ಕಾರಣವೇನೂ ಇಲ್ಲ; ಆದರೆ ನಾವು ಒಂದಾದ ನಂತರ ಮತ್ತೊಂದು ಕ್ರೀಡಾಂಗಣಕ್ಕೆ ತೆರಳಿದೆವು ಮತ್ತು ಅಲ್ಲಿನ ಮೈದಾನದ ಅಳತೆಗಳು ಹಾಗೂ ಪರಿಸ್ಥಿತಿಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಬೇಕಾಯಿತು. ನಾವು ನಿರೀಕ್ಷಿಸಿದ್ದಷ್ಟು ವೇಗವಾಗಿ ಆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಅದು ಒಂದು ಸವಾಲಾದರೆ, ಇನ್ನೊಂದು ವಿಷಯವೆಂದರೆ ಅವರು ಆಟದ ಎಲ್ಲ ವಿಭಾಗಗಳಲ್ಲೂ ಖಂಡಿತವಾಗಿಯೂ ನಮಗಿಂತ ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ, ಈ ಎಲ್ಲಾ ಅಂಶಗಳ ಸಂಯೋಜನೆಯೇ ಅಂತಿಮವಾಗಿ ಇಂತಹ ಫಲಿತಾಂಶಕ್ಕೆ ಕಾರಣವಾಯಿತು ಎಂದು ನಾನು ಭಾವಿಸುತ್ತೇನೆ' ಎಂದು ಶ್ರೇಯಸ್ ಅಯ್ಯರ್ ಹೇಳಿದರು.

'ಇಂಗ್ಲೆಂಡ್‌ಗೆ ಬಂದು ಸರಣಿಯನ್ನು ಗೆಲ್ಲಬಹುದು ಎಂಬ ಮನಸ್ಥಿತಿಯನ್ನು ಮಾತ್ರ ಹೊಂದಿದ್ದರೆ ಸಾಲದು. ಕಠಿಣ ಪರಿಶ್ರಮ ಪಡಬೇಕು ಮತ್ತು ಏಕಾಗ್ರತೆಯಿಂದ ಇರಬೇಕು; ತಂಡವಾಗಿ ನಾವು ಹಾಗೆಯೇ ಇದ್ದೆವು. ಆದರೆ, ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ - ಹೀಗೆ ಮೂರೂ ವಿಭಾಗಗಳಲ್ಲಿ ಅತ್ಯುತ್ತಮ ಆಟವಾಡಿದರು ಎಂದು ನನಗೆ ವೈಯಕ್ತಿಕವಾಗಿ ಅನ್ನಿಸುತ್ತದೆ. ಹೀಗಾಗಿ, ಫಲಿತಾಂಶಗಳು ಅವರ ಪರವಾಗಿಯೇ ಬಂದವು' ಎಂದರು.

'ಒತ್ತಡದ ನಡುವೆಯೂ ಉತ್ತಮವಾಗಿ ಕಾರ್ಯನಿರ್ವಹಿಸುವುದು ಮತ್ತು ಅಂತಹ ಸಂದರ್ಭಗಳಿಂದ ಪಾಠ ಕಲಿಯುವುದು ಖಂಡಿತವಾಗಿಯೂ ನನ್ನನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಆಟಗಾರನನ್ನಾಗಿ ಮಾಡುತ್ತದೆ. ಸದ್ಯಕ್ಕೆ ನನ್ನ ಮನಸ್ಥಿತಿ ಇದೇ ಆಗಿದೆ. ಈ ಸರಣಿಯನ್ನು ಜನರು ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ; ಏಕೆಂದರೆ, ಏಳು-ಬೀಳುಗಳು ಈ ಆಟದ ಅವಿಭಾಜ್ಯ ಅಂಗಗಳಾಗಿವೆ' ಎಂದು ಅಯ್ಯರ್ ಹೇಳಿದರು.

ಮುಂದಿನ ದಿನಗಳಲ್ಲಿ, ವಿಶೇಷವಾಗಿ ವಿದೇಶಿ ಪರಿಸ್ಥಿತಿಗಳಲ್ಲಿ, ನನ್ನೊಂದಿಗೆ ಆಡುವ ಎಲ್ಲರನ್ನೂ ಬೆಳೆಸುವ ಮತ್ತು ಪ್ರೋತ್ಸಾಹಿಸುವ ವಿಷಯದಲ್ಲಿ ನಾನು ಅತ್ಯಂತ ಸಕಾರಾತ್ಮಕವಾಗಿರಬೇಕಿದೆ. ಆಸ್ಟ್ರೇಲಿಯಾ ಹಾಗೂ ಅದಕ್ಕೂ ಮುನ್ನ ಇತರ ಹಲವು ಕಡೆಗಳಲ್ಲಿ ನಾವು ಆಡಲಿದ್ದೇವೆ. ಆದ್ದರಿಂದ, ಅಂತಹ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತಹ ಉತ್ತಮ ಒಗ್ಗಟ್ಟನ್ನು ಬೆಳೆಸಿಕೊಳ್ಳುವುದೇ ನಮ್ಮ ಗುರಿ; ಮುಂದಿನ ದಿನಗಳಲ್ಲಿ ಇದೇ ನಮ್ಮ ಕಾರ್ಯಯೋಜನೆಯಾಗಿರಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com