ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯಲಿರುವ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯವೇ ರೋಹಿತ್ ಶರ್ಮಾ ಕೊನೆಯ ಏಕದಿನ ಪಂದ್ಯ ಎನ್ನುವ ವದಂತಿಗಳು ವ್ಯಾವಪಕವಾಗಿ ಹರಡಿದೆ. ಭಾನುವಾರ ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿನ ಗೆಲುವು ಪ್ರವಾಸಿ ತಂಡಕ್ಕೆ 2-1 ಅಂತರದ ಸರಣಿ ಜಯವನ್ನು ತಂದುಕೊಡಲಿದೆ. ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ತಮ್ಮ ಆಟದತ್ತ ಗಮನಹರಿಸುವಂತೆ ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ಟೀಂ ಇಂಡಿಯಾದ ಆಟಗಾರರಿಗೆ ಸೂಚಿಸಿದ್ದಾರೆ.
ಯುಕೆಯಲ್ಲಿರುವ ಭಾರತದ ಉಪ ಹೈಕಮಿಷನರ್ ಕಾರ್ತಿಕ್ ಪಾಂಡೆ ಅವರು 'ಇಂಡಿಯಾ ಹೌಸ್'ನಲ್ಲಿ ಸಂಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, 'ಭಾರತದಲ್ಲಿನ ಸಮಸ್ಯೆಯೆಂದರೆ, ಶೇ 99 ರಷ್ಟು ಜನರು ಕ್ರಿಕೆಟ್ನಲ್ಲಿ ಪರಿಣಿತರಾಗಿರುತ್ತಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳಿಂದ ದೂರವಿರುವುದು ಉತ್ತಮ. ಟೀಂ ಇಂಡಿಯಾದಲ್ಲಿ ಪ್ರತಿಭೆಗೆ ಯಾವುದೇ ಕೊರತೆಯಿಲ್ಲ, ತಂಡವು ಪ್ರತಿಭಾನ್ವಿತ ಆಟಗಾರರಿಂದ ಕೂಡಿದೆ ಎಂದು ಶುಕ್ಲಾ ಹೇಳಿದರು.
ಯುಕೆ (UK) ಗಾಗಿ ಭಾರತದ ಹೈಕಮಿಷನರ್ ಆಗಿರುವ ಪಿ. ಕುಮಾರನ್ ಅವರು ತಂಡವನ್ನು ಸ್ವಾಗತಿಸಿದರು ಮತ್ತು ಈ ವಾರವಷ್ಟೇ ಜಾರಿಗೆ ಬಂದಿರುವ 'ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ'ದ (CETA) ವ್ಯಾಪಕ ಪರಿಣಾಮಗಳ ಕುರಿತು ಬೆಳಕು ಚೆಲ್ಲಿದರು.
'ಇದು [CETA] ವಾಣಿಜ್ಯ ಸೇವೆಗಳು ಹಾಗೂ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನೇಕ ಅವಕಾಶಗಳನ್ನು ತೆರೆದುಕೊಡುತ್ತದೆ ಎಂದು ನಾವು ಆಶಿಸುತ್ತೇವೆ. ಕಳೆದ ವರ್ಷಗಳಲ್ಲಿ, ತಮ್ಮ ಸಾಧನೆಗಳ ಮೂಲಕ 'ಟೀಂ ಇಂಡಿಯಾ' ನಮಗೆ ಪದೇ ಪದೆ ಹೆಮ್ಮೆ ತಂದಿದೆ' ಎಂದು ಅವರು ಸೇರಿಸಿದರು.
ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್, 'ಬಾಹ್ಯ ಅಂಶಗಳಿಂದ' ದೂರವಿರುವುದು ಮೈದಾನದ ಒಳಗೆ ಮತ್ತು ಹೊರಗೆ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲು ತಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಶನಿವಾರ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಗಿಲ್, 'ನನ್ನ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುವ ಮತ್ತು ಬಾಹ್ಯ ಅಂಶಗಳಿಂದ ದೂರವಿರುವ ಮೂಲಕ ನಾನು ಒತ್ತಡವನ್ನು ನಿಭಾಯಿಸುತ್ತೇನೆ' ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕೆಲವು ಗಾಯದ ಸಮಸ್ಯೆಗಳನ್ನು ಎದುರಿಸಿದ್ದ ಭಾರತದ ಟಿ20ಐ (T20I) ತಂಡದ ನಾಯಕ ಶ್ರೇಯಸ್ ಅಯ್ಯರ್, ತಾವು ಮತ್ತೆ ಕಣಕ್ಕಿಳಿಯಲು ಸ್ಫೂರ್ತಿ ನೀಡಿದ ತಮ್ಮ ತಂಡದ ಸಹ ಆಟಗಾರರಿಗೆ ಧನ್ಯವಾದ ಅರ್ಪಿಸಿದರು.
'ನಾನು ಆಸ್ಪತ್ರೆಯಿಂದ ಹೊರಬರಲು ಮಾತ್ರ ಬಯಸಿದ್ದೆ. ನನ್ನ ತಂಡದ ಸದಸ್ಯರಿಂದ ಬಂದ ಕರೆಗಳು, ತರಬೇತಿಗೆ ಮರಳಿ ಇನ್ನಷ್ಟು ಬಲಶಾಲಿಯಾಗಿ ಹೊರಹೊಮ್ಮಲು ನನಗೆ ಹೆಚ್ಚಿನ ಪ್ರೇರಣೆ ನೀಡಿದವು' ಎಂದು ಅವರು ಹೇಳಿದರು.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಯುಕೆಯನ್ನು ವಿಶೇಷ ಸ್ಥಳ ಎಂದು ಬಣ್ಣಿಸಿದರು. ಏಕೆಂದರೆ, ಉಭಯ ದೇಶಗಳ ನಡುವಿನ ಇತಿಹಾಸವು ಎಂದಿಗೂ ಮರೆಯಲಾಗದಂಥದ್ದು ಮತ್ತು ಅದನ್ನು ಎಂದಿಗೂ ಮರೆಯಬಾರದು' ಎಂದರು.
ಭಾರತೀಯ ಕ್ರಿಕೆಟ್ ಕೇವಲ ಡ್ರೆಸ್ಸಿಂಗ್ ರೂಮ್ನಲ್ಲಿರುವವರಿಗೆ ಮಾತ್ರ ಸೇರಿದ್ದಲ್ಲ; ಇದು ನಮಗೆ ನಿಸ್ವಾರ್ಥವಾಗಿ ಮತ್ತು ಬೇಷರತ್ತಾಗಿ ಬೆಂಬಲ ನೀಡುವ ಪ್ರತಿಯೊಬ್ಬ ಪ್ರಾಮಾಣಿಕ ಭಾರತೀಯ ಕ್ರಿಕೆಟ್ ಅಭಿಮಾನಿಗೂ ಸೇರಿದ್ದು ಎಂದು ಹೇಳಿದರು.