

ಐಪಿಎಲ್ 2026 ಮುಗಿದು ಕೆಲವೇ ವಾರಗಳು ಕಳೆದಿದ್ದರೂ, ಟ್ರೇಡಿಂಗ್ ವದಂತಿಗಳು ಈಗಾಗಲೇ ಜೋರಾಗಿವೆ. ಹಾರ್ದಿಕ್ ಪಾಂಡ್ಯ ಅದರ ಕೇಂದ್ರಬಿಂದುವಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಬದಲಾಯಿಸಲು ರಾಜಸ್ಥಾನ್ ರಾಯಲ್ಸ್ (ಆರ್ಆರ್) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ಮಾತುಕತೆಯಲ್ಲಿ ತೊಡಗಿವೆ ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ಹೊಸ ವರದಿ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಪಡೆಯಲು ಮುಂದಾಗಿದೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ, ಮಾನಸಿಕವಾಗಿ ದಣಿದಿರುವುದರಿಂದ ಎಂಐ ತೊರೆಯುವ ಇಚ್ಛೆಯನ್ನು ಹಾರ್ದಿಕ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ಐಪಿಎಲ್ ಒಳಗಿನ ವ್ಯಕ್ತಿಯೊಬ್ಬರು ಹಾರ್ದಿಕ್ ಅವರನ್ನು ಒಳಗೊಂಡ ಸಂಭಾವ್ಯ ಟ್ರೇಡಿಂಗ್ ಕುರಿತು ಕೆಕೆಆರ್ನ ಉನ್ನತ ಆಡಳಿತ ಮಂಡಳಿ ಮತ್ತು ಎಂಐ ಮಾಲೀಕತ್ವದ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಮೂರು ಬಾರಿಯ ಚಾಂಪಿಯನ್ಗಳು ಐಪಿಎಲ್ 2025ರ ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಸಂಪರ್ಕಿಸಿದ್ದರು. ಆದರೆ, ರಿಲಯನ್ಸ್ನ ವಾರ್ಷಿಕ ಮಹಾಸಭೆಯಿಂದಾಗಿ ಈ ವಿಷಯವನ್ನು ಮುಂದೂಡಲಾಯಿತು. ಪಾಂಡ್ಯ ಕೆಕೆಆರ್ಗೆ ಸ್ಥಳಾಂತರಗೊಂಡರೆ, ಅವರನ್ನು ನಾಯಕನನ್ನಾಗಿ ಮಾಡಬಹುದು ಮತ್ತು ಐಪಿಎಲ್ 2027ರ ಮಿನಿ-ಹರಾಜಿಗೆ ಮುಂಚಿತವಾಗಿ ಅಜಿಂಕ್ಯ ರಹಾನೆ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳುತ್ತದೆ.
'ಅಜಿಂಕ್ಯ ರಹಾನೆ ಯಾವಾಗಲೂ ಕೆಕೆಆರ್ ತಂಡಕ್ಕೆ ಸೂಕ್ತ ಆಟಗಾರರಲ್ಲ ಮತ್ತು ಈ ಆವೃತ್ತಿಯ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಕಳೆದ ಆವೃತ್ತಿಯ ಅಂತ್ಯದ ವೇಳೆಗೆ ಕೆಕೆಆರ್ನ ಉನ್ನತ ಅಧಿಕಾರಿಗಳು ಎಂಐ ಮಾಲೀಕರನ್ನು ಸಂಪರ್ಕಿಸಿದ್ದರು. ಆದರೆ, ರಿಲಯನ್ಸ್ನ ವಾರ್ಷಿಕ ವಾರ್ಷಿಕ ಮಹಾಸಭೆ ಹತ್ತಿರ ಬಂದಿದ್ದರಿಂದ, ಆ ಹಂತದಲ್ಲಿ ಐಪಿಎಲ್ ಟ್ರೇಡಿಂಗ್ ಚರ್ಚೆಗಳು ಆದ್ಯತೆಯಾಗಿರಲಿಲ್ಲ. ಆದಾಗ್ಯೂ, ಕೆಕೆಆರ್ ಮತ್ತೊಮ್ಮೆ ಎಂಐನ ಉನ್ನತ ನಾಯಕತ್ವವನ್ನು ಸಂಪರ್ಕಿಸಿದೆ ಮತ್ತು ಕೆಲವು ಸುತ್ತಿನ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ' ಎಂದು ಮೂಲಗಳು ತಿಳಿಸಿವೆ.
ಪಾಂಡ್ಯ ಅವರಿಗಾಗಿ ಮುಂಬೈ ಜೊತೆ ಕೆಕೆಆರ್ ಸಂಪೂರ್ಣ ನಗದು ಒಪ್ಪಂದವನ್ನು ಅನ್ವೇಷಿಸುತ್ತಿದೆ ಎಂದು ಪಿಟಿಐ ವರದಿ ಹೇಳುತ್ತದೆ. ಆದಾಗ್ಯೂ, ಮುಂಬೈ ಇಂಡಿಯನ್ಸ್ ಸಂಪೂರ್ಣ ನಗದು ಒಪ್ಪಂದಕ್ಕೆ ಒಪ್ಪಿಗೆ ನೀಡುತ್ತದೆಯೇ ಅಥವಾ ಆಟಗಾರರ ವಿನಿಮಯವನ್ನು ಬಯಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಎರಡು ಆವೃತ್ತಿಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ ಹಾರ್ದಿಕ್ ಪಾಂಡ್ಯ ಅವರನ್ನು 2024ರಲ್ಲಿ ಮುಂಬೈ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ರೋಹಿತ್ ಶರ್ಮಾ ಅವರ ಬದಲಿಗೆ ಅವರನ್ನು ನಾಯಕನನ್ನಾಗಿ ಮಾಡಲಾಯಿತು. ಈ ನಡೆ ಅಭಿಮಾನಿಗಳು ಮತ್ತು ವಿಮರ್ಶಕರಿಗೆ ಇಷ್ಟವಾಗಲಿಲ್ಲ. ಆಲ್ ರೌಂಡರ್ ನಾಯಕತ್ವದಲ್ಲಿ, ಮುಂಬೈ ತಂಡವು 3 ಆವೃತ್ತಿಗಳಲ್ಲಿ 2ರಲ್ಲಿ IPL ಪ್ಲೇಆಫ್ಗೆ ಅರ್ಹತೆ ಪಡೆಯಲು ವಿಫಲವಾಯಿತು. ಐಪಿಎಲ್ ಅಂಕಪಟ್ಟಿಯಲ್ಲಿ 2024ರಲ್ಲಿ 10 ನೇ ಸ್ಥಾನ, 2025ರಲ್ಲಿ 3ನೇ ಸ್ಥಾನ ಮತ್ತು 2026ರಲ್ಲಿ 9ನೇ ಸ್ಥಾನ ಪಡೆಯಿತು.
ಈಮಧ್ಯೆ, ತಂಡವನ್ನು ಮೂರನೇ ಪ್ರಶಸ್ತಿಗೆ ಮುನ್ನಡೆಸಿದ ನಂತರ ಶ್ರೇಯಸ್ ಅಯ್ಯರ್ ಅವರನ್ನು ಬಿಡುಗಡೆ ಮಾಡಿದ ನಂತರ 2025ರಲ್ಲಿ ಕೆಕೆಆರ್ ಅನುಭವಿ ಆಟಗಾರ ರಹಾನೆಯನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಬೇಕಾಯಿತು. ಮುಂಬೈಕರ್ ನಾಯಕತ್ವದಲ್ಲಿ, ಕೆಕೆಆರ್ ಸತತ ಎರಡು ಸೀಸನ್ಗಳಲ್ಲಿ ಪ್ಲೇಆಫ್ಗೆ ಪ್ರವೇಶಿಸಲು ವಿಫಲವಾಯಿತು. 2025 ಮತ್ತು 2026ರಲ್ಲಿ ಕ್ರಮವಾಗಿ 8 ಮತ್ತು 7ನೇ ಸ್ಥಾನ ಗಳಿಸಿತು. ಐಪಿಎಲ್ 2026ರಲ್ಲಿ ರಿಂಕು ಸಿಂಗ್ ಅವರನ್ನು ಉಪನಾಯಕನನ್ನಾಗಿ ಹೆಸರಿಸಲಾಯಿತು. ಆದರೂ, ಹಾರ್ದಿಕ್ ಪಾಂಡ್ಯ ಅವರನ್ನು ಕೆಕೆಆರ್ ತಮ್ಮ ಮುಂದಿನ ನಾಯಕ ಎಂದು ನೋಡುತ್ತಿದೆ ಎನ್ನಲಾಗಿದೆ.
Advertisement