

ಐಪಿಎಲ್ 2025ರ ಮೆಗಾ-ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ರಿಷಭ್ ಪಂತ್ ಅವರನ್ನು ₹27 ಕೋಟಿಗೆ ಖರೀದಿಸಿದಾಗ, ಅವರು ಮುಂದಿನ 15 ವರ್ಷಗಳ ಕಾಲ ಫ್ರಾಂಚೈಸಿಗಾಗಿ ಆಡುತ್ತಾರೆ ಎಂದು ತಂಡದ ಮಾಲೀಕ ಸಂಜೀವ್ ಗೋಯೆಂಕಾ ಪ್ರತಿಪಾದಿಸಿದ್ದರು. ಪ್ರತಿಭಾನ್ವಿತ ಆಟಗಾರ ಪಂತ್ ತಂಡದ ಅದೃಷ್ಟವನ್ನು ಬದಲಿಸುತ್ತಾರೆ ಮತ್ತು ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಹ ಕಾರಣರಾಗುತ್ತಾರೆ ಎಂದು ಭರವಸೆ ನೀಡಿದ್ದರು. ಆದಾಗ್ಯೂ, ಈ ಸಂಬಂಧವು ಕೇವಲ ಎರಡು ಆವೃತ್ತಿಗಳಲ್ಲಿಯೇ ಕೊನೆಗೊಳ್ಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.
ಮಂಗಳವಾರ, ರಿಷಭ್ ಅವರನ್ನು ₹15 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ. ಈ ಮೂಲಕ ಎಲ್ಎಸ್ಜಿ ನಾಯಕನಾಗಿ ತಂಡದ ಕಳಪೆ ಸಾಧನೆಯ ನಂತರ, ಪಂತ್ ಅವರ ಫ್ರಾಂಚೈಸಿಯೊಂದಿಗಿನ ಸಂಬಂಧವು ಕೊನೆಗೊಂಡಿದೆ. ಈ ಟ್ರೇಡಿಂಗ್ ನಂತರ, 2025ರಲ್ಲಿ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ನಂತರ ಗೋಯೆಂಕಾ ಅವರ ಹೇಳಿಕೆಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪಂತ್ ಡಿಸಿ ತಂಡಕ್ಕೆ ವರ್ಗಾವಣೆಗೊಂಡ ನಂತರ, ಅಭಿಮಾನಿಗಳು ಗೋಯೆಂಕಾ ಅವರ ಹಳೆಯ ವಿಡಿಯೋವನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು. ರಿಷಭ್ ಕನಿಷ್ಠ 12-15 ವರ್ಷಗಳ ಕಾಲ ಎಲ್ಎಸ್ಜಿ ಪರ ಆಡುತ್ತಾರೆ ಎಂದ ಗೋಯೆಂಕಾ, ಮುಂದಿನ ದಶಕದಲ್ಲಿ ತಂಡವು ಐದರಿಂದ ಆರು ಪ್ರಶಸ್ತಿಗಳನ್ನು ಗೆಲ್ಲಬಹುದು ಎಂಬುದರ ಕುರಿತು ಮಾತನಾಡಿದ್ದರು. ಆಗ ಜನರು ಪಂತ್ ಅವರನ್ನು ಸಿಎಸ್ಕೆ ಮತ್ತು ಎಂಐ ತಂಡವನ್ನು ಕ್ರಮವಾಗಿ ಐದು ಪ್ರಶಸ್ತಿಗಳಿಗೆ ಮುನ್ನಡೆಸಿದ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರಂತಹ ನಾಯಕರೊಂದಿಗೆ ಹೋಲಿಸುತ್ತಾರೆ ಎಂದು ಹೇಳಿದ್ದರು.
'ನನ್ನ ಅಭಿಪ್ರಾಯದಲ್ಲಿ, ಅವರು ಇನ್ನೂ 12 ರಿಂದ 15 ವರ್ಷಗಳ ಕಾಲ ಎಲ್ಎಸ್ಜಿ ಪರ ಆಡುತ್ತಾರೆ. ಮುಂದಿನ 15 ವರ್ಷಗಳಲ್ಲಿ ಐದು ಅಥವಾ ಆರು ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲುವುದು ಹೇಗೆ ಎಂಬುದರ ಪ್ರಯಾಣ ಇದು. ಇಂದು, ಜನರು ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಅತ್ಯಂತ ಯಶಸ್ವಿ ಫ್ರಾಂಚೈಸಿಗಳೆಂದು ಮಾತನಾಡುತ್ತಾರೆ. ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅದ್ಭುತ ಎನ್ನುತ್ತಾರೆ. ಆದರೆ, ನನ್ನ ಮಾತುಗಳನ್ನು ನೆನಪಿನಲ್ಲಿಡಿ, ಇಂದಿನಿಂದ 10 ವರ್ಷಗಳ ನಂತರ, ಜನರು ಮಹಿ, ರೋಹಿತ್ ಮತ್ತು ರಿಷಭ್ ಬಗ್ಗೆ ಮಾತನಾಡುತ್ತಾರೆ' ಎಂದು ಗೋಯೆಂಕಾ ಹೇಳಿದ್ದರು.
ಆದರೆ, ಇದೆಲ್ಲವೂ ಕೇವಲ 2 ವರ್ಷಗಳಲ್ಲಿ ಬದಲಾಯಿತು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಪಂತ್ ಅವರ ಸಾಧನೆ ಅದ್ಭುತವಾಗಿರಲಿಲ್ಲ. 2025ರಲ್ಲಿ, ತಂಡವು ಐಪಿಎಲ್ ಅಂಕ ಪಟ್ಟಿಯಲ್ಲಿ 7ನೇ ಸ್ಥಾನ ಮತ್ತು 2026ರಲ್ಲಿ 10ನೇ ಸ್ಥಾನ ಪಡೆಯಿತು. ತಂಡವನ್ನು ಚೊಚ್ಚಲ ಟ್ರೋಫಿಗೆ ಕೊಂಡೊಯ್ಯುವ ಮತ್ತು ಫ್ರಾಂಚೈಸಿಯ ಮಾಲೀಕರ ಆಕಾಂಕ್ಷೆಗಳನ್ನು ಪೂರೈಸಲು ಪಂತ್ಗೆ ಸಾಧ್ಯವಾಗಲಿಲ್ಲ.
ಐಪಿಎಲ್ 2026ರ ಪ್ಲೇಆಫ್ ತಲುಪಲು ಎಲ್ಎಸ್ಜಿ ವಿಫಲವಾದ ನಂತರ ಟಾಮ್ ಮೂಡಿ ನಾಯಕತ್ವ ಬದಲಾವಣೆಯ ಬಗ್ಗೆ ಸುಳಿವು ನೀಡಿದ್ದರು. ಅದಾದ ಸ್ವಲ್ಪ ಸಮಯದ ನಂತರ, ರಿಷಭ್ ನಾಯಕತ್ವ ತ್ಯಜಿಸಿದರು.
ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು ತಂಡದ ನಿರ್ವಹಣೆ ಮತ್ತು ಆಟಗಾರರೊಂದಿಗೆ ಸೌಹಾರ್ದಯುತ ಸಂಬಂಧ ಕಾಪಾಡಿಕೊಳ್ಳಲು ಹೆಣಗಾಡಿದ್ದಾರೆ ಎಂಬುದು ರಹಸ್ಯವಲ್ಲ. ಈ ಹಿಂದೆ ಎಂಎಸ್ ಧೋನಿ (ಆರ್ಪಿಎಸ್ಜಿಯಲ್ಲಿ) ಮತ್ತು ಕೆಎಲ್ ರಾಹುಲ್ (ಎಲ್ಎಸ್ಜಿ) ಅವರನ್ನು ನಾಯಕ ಸ್ಥಾನದಿಂದ ತೆಗೆದುಹಾಕಿದ್ದನ್ನು ಮತ್ತು ತಂಡ ಸೋತಾಗ ಅವರನ್ನು ನಡೆಸಿಕೊಂಡ ರೀತಿಯನ್ನು ಅಭಿಮಾನಿಗಳು ಮರೆತಿಲ್ಲ. ಈಗ, ಪಂತ್ ಆ ಪಟ್ಟಿಗೆ ಸೇರ್ಪಡೆಗೊಂಡ ಇತ್ತೀಚಿನ ವ್ಯಕ್ತಿ.
Advertisement