ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾರತ ಒತ್ತಡವನ್ನು ನಿಭಾಯಿಸಲು ಸಿದ್ಧವಾಗಿದೆ ಎಂದು ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಸ್ಪಷ್ಟಪಡಿಸಿದ್ದಾರೆ. 'ಹೊರಗಿನ ಒತ್ತಡ ಅಥವಾ ಎದುರಾಳಿ ತಂಡದ ಬಗ್ಗೆ ಚಿಂತಿಸುವುದಕ್ಕಿಂತ, ತಂಡದ ಸ್ವಂತ ಸಾಮರ್ಥ್ಯ ಮತ್ತು ಅವರನ್ನು ಇಲ್ಲಿಯವರೆಗೆ ಕರೆತಂದ ಪ್ರದರ್ಶನದ ಮೇಲೆ ಗಮನಹರಿಸುವುದು ತಂಡದ ಆದ್ಯತೆಯಾಗಿದೆ' ಎಂದು ಟೆನ್ ಡೋಸ್ಚೇಟ್ ಶನಿವಾರ ಕೋಲ್ಕತ್ತಾದಲ್ಲಿ ನಡೆದ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ವರ್ಚುವಲ್ ಕ್ವಾರ್ಟರ್ ಫೈನಲ್ನಲ್ಲಿ ಹಿರಿಯ ಆಟಗಾರರು ಅವಕಾಶಕ್ಕೆ ತಕ್ಕಂತೆ ಆಟವಾಡುವ ಮೂಲಕ ಒತ್ತಡವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ಸಹಾಯಕ ತರಬೇತುದಾರ ಹೇಳಿದರು.
'ಹಿರಿಯ, ಅನುಭವಿ ಆಟಗಾರರು ಉತ್ತಮ ಪ್ರದರ್ಶನ ನೀಡುವುದು, ಶಾಂತವಾಗಿರುವುದು ಮತ್ತು ತಂಡದ ಸಾಬೀತಾದ ವಿಧಾನಕ್ಕೆ ಅಂಟಿಕೊಳ್ಳುವುದು ಮುಖ್ಯವಾಗಿದೆ. ಒತ್ತಡವನ್ನು ತಪ್ಪಿಸುವ ಬದಲು, ತಂಡವು ಅದನ್ನು ಅಳವಡಿಸಿಕೊಳ್ಳುವುದರಲ್ಲಿ ನಂಬಿಕೆ ಇಡುತ್ತದೆ. ಈ ಮನಸ್ಥಿತಿಯನ್ನು ಅವರು ವಿಶ್ವಕಪ್ನಲ್ಲಿ ಮಾತ್ರವಲ್ಲದೆ ದ್ವಿಪಕ್ಷೀಯ ಸರಣಿಗಳಲ್ಲಿಯೂ ಅನುಸರಿಸಿದ್ದಾರೆ' ಎಂದು ಅವರು ಹೇಳಿದರು.
'ನಮ್ಮ ಎಲ್ಲ ಸಿದ್ಧತೆಗಳು ಒತ್ತಡ ಬಂದಾಗ ಅದನ್ನು ಸ್ವೀಕರಿಸುವತ್ತಲೇ ಇದ್ದವು. ಆಟಗಾರರಿಗೆ ತಮ್ಮ ದೇಶವನ್ನು ಪ್ರತಿನಿಧಿಸುವುದು ಮತ್ತು ಆಡುವುದು, ಪಂದ್ಯಾವಳಿಯಲ್ಲಿ ಜೀವಂತವಾಗಿರಲು ಈಡನ್ ಗಾರ್ಡನ್ಸ್ನಲ್ಲಿನ ನಿರ್ಣಾಯಕ ಪಂದ್ಯವನ್ನು ಆಡುವುದು ಒಂದು ಸುಯೋಗ ಎಂದು ನಾವು ಆಟಗಾರರಿಗೆ ನಿರಂತರವಾಗಿ ಹೇಳುತ್ತಿದ್ದೇವೆ' ಎಂದು ಟೆನ್ ಡೋಸ್ಚೇಟ್ ಹೇಳಿದರು.
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟಿ20ಐಗಳಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಎರಡೂ ತಂಡಗಳ ನಡುವೆ ನಡೆದಿರುವ 30 ಪಂದ್ಯಗಳಲ್ಲಿ 19 ಪಂದ್ಯಗಳನ್ನು ಭಾರತ ಗೆದ್ದಿದೆ. ಆದರೆ, ವೆಸ್ಟ್ ಇಂಡೀಸ್ ಕೇವಲ ಹತ್ತು ಬಾರಿ ಮಾತ್ರ ಜಯಗಳಿಸಿದೆ.
ಗುರುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೂಪರ್ 8 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 72 ರನ್ಗಳ ಪ್ರಬಲ ಗೆಲುವು ಸಾಧಿಸುವ ಮೂಲಕ ಭಾರತ ತಂಡವು ಸೆಮಿಫೈನಲ್ಗೆ ಅರ್ಹತೆ ಪಡೆಯಲು ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತಿದ್ದು, ಸದ್ಯ ಎರಡು ಅಂಕಗಳನ್ನು ಹೊಂದಿದೆ.
ಭಾರತ ತಂಡವು ಈಡನ್ ಗಾರ್ಡನ್ಸ್ನಲ್ಲಿ 2016ರ ಟಿ20 ವಿಶ್ವಕಪ್ನಲ್ಲಿ, ಪಾಕಿಸ್ತಾನವನ್ನು ಎದುರಿಸಿತು. ಅಲ್ಲಿ ಭಾರತ ತಂಡವು ಆರು ವಿಕೆಟ್ಗಳಿಂದ ಜಯಗಳಿಸುವಲ್ಲಿ ಯಶಸ್ವಿಯಾಯಿತು. 2022ರಲ್ಲಿ ಭಾರತವು ಈಡನ್ ಗಾರ್ಡನ್ಸ್ನಲ್ಲಿ ಟಿ20ಐಗಳಲ್ಲಿ ಮೂರು ಬಾರಿ ವೆಸ್ಟ್ ಇಂಡೀಸ್ ಅನ್ನು ಎದುರಿಸಿತು ಮತ್ತು ಎಲ್ಲಾ ಪಂದ್ಯಗಳನ್ನು ಗೆದ್ದಿತು.
Advertisement