

ಕೊಲಂಬೊ: ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾದ ಕಳಪೆ ಪ್ರದರ್ಶನವು ದೇಶದ ಕ್ರಿಕೆಟ್ ಮಂಡಳಿಯಲ್ಲಿ ಮೇಜರ್ ಸರ್ಜರಿಗೆ ಕಾರಣವಾಗಬಹುದು ಎನ್ನಲಾಗಿದೆ. ದೇಶದಲ್ಲಿ ಕ್ರಿಕೆಟ್ ಅನ್ನು ಪುನರ್ರಚಿಸಲು ಮತ್ತು ಸುಧಾರಿಸಲು ತಾತ್ಕಾಲಿಕ ಸಮಿತಿಯನ್ನು ರಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಕ್ರೀಡಾ ಸಚಿವ ಸುನಿಲ್ ಕುಮಾರ್ ಗಮಗೆ ಗುರುವಾರ ಹೇಳಿದ್ದಾರೆ.
ಭಾರತದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸಿರುವ ಶ್ರೀಲಂಕಾ ತಂಡವು ತನ್ನ ಎಲ್ಲ ಸೂಪರ್ 8 ಪಂದ್ಯಗಳನ್ನು ಸೋತ ನಂತರ ಟೂರ್ನಿಯಿಂದ ಹೊರಬಿದ್ದಿದೆ.
'ಕ್ರೀಡೆಯನ್ನು ಪುನರ್ನಿರ್ಮಿಸಲು ಎಸ್ಎಲ್ಸಿ (ಶ್ರೀಲಂಕಾ ಕ್ರಿಕೆಟ್) ಆಡಳಿತವನ್ನು ಮಧ್ಯಂತರ ಸಮಿತಿಗೆ ಹಸ್ತಾಂತರಿಸಲು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಜೊತೆ ಚರ್ಚೆಗಳು ನಡೆಯುತ್ತಿವೆ' ಎಂದು ಗಮಗೆ ಸುದ್ದಿಗಾರರಿಗೆ ತಿಳಿಸಿದರು.
ಸದ್ಯ ಎಸ್ಎಲ್ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಅವರ ಅಧಿಕಾರಾವಧಿ 2027ರ ಮೇವರೆಗೆ ಇದೆ. ಕಳೆದ ವಾರ ಶಮ್ಮಿ ಸಿಲ್ವಾ ನೇತೃತ್ವದ ಆಡಳಿತ ಮಂಡಳಿಯ ರಾಜೀನಾಮೆಗೆ ಒತ್ತಾಯಿಸಿ ಎಸ್ಎಲ್ಸಿ ಪ್ರಧಾನ ಕಚೇರಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
ಸೂಪರ್ 8 ಹಂತದಲ್ಲಿ ಕುಸಿತ ಕಾಣುವ ಮೊದಲು, ಶ್ರೀಲಂಕಾ ತಂಡವು ಗುಂಪು ಹಂತದಲ್ಲಿ ಕೆಳ ಶ್ರೇಯಾಂಕಿತ ಜಿಂಬಾಬ್ವೆ ವಿರುದ್ಧ ಸೋತಿತ್ತು.
ಐಸಿಸಿ ಜೊತೆ ನಡೆಯುತ್ತಿರುವ ಮಾತುಕತೆಗಳಲ್ಲಿ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಕೂಡ ಭಾಗಿಯಾಗಿದ್ದಾರೆ. ಶ್ರೀಲಂಕಾ ಹಿಂದೆ ಮಾಡಿದಂತೆ ಮತ್ತೆ ನಿಷೇಧಕ್ಕೊಳಗಾಗುವುದನ್ನು ತಪ್ಪಿಸಲು ಐಸಿಸಿ ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸಲು ಮುಂದಾಗಿದೆ ಎಂದು ಗಮಗೆ ಹೇಳಿದರು.
2024ರಲ್ಲಿ, ಭ್ರಷ್ಟಾಚಾರದ ಆರೋಪದ ಆಧಾರದ ಮೇಲೆ ಆಗಿನ ಕ್ರೀಡಾ ಸಚಿವ ರೋಶನ್ ರಣಸಿಂಘೆ ಸಿಲ್ವಾ ಅವರನ್ನು ವಜಾಗೊಳಿಸಿದಾಗ ಐಸಿಸಿ ಶ್ರೀಲಂಕಾದ ಸದಸ್ಯತ್ವವನ್ನು ಅಮಾನತುಗೊಳಿಸಿತು.
ಕ್ರೀಡೆಯ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಉಲ್ಲೇಖಿಸಿ, ಐಸಿಸಿ ಶ್ರೀಲಂಕಾದಲ್ಲಿ ನಡೆಯಬೇಕಿದ್ದ 2025ರ ಅಂಡರ್-19 ವಿಶ್ವಕಪ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿತ್ತು.
ಶ್ರೀಲಂಕಾದ 1973ರ ಕ್ರೀಡಾ ಕಾನೂನು, ಕ್ರೀಡಾ ಸಚಿವರಿಗೆ ಕ್ರೀಡಾ ಸಂಸ್ಥೆಗಳನ್ನು ಶಿಸ್ತುಬದ್ಧಗೊಳಿಸಲು ಅವಕಾಶ ನೀಡುತ್ತದೆ.
ಶ್ರೀಲಂಕಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ 2014ರ ಹಿಂದಿನ ಮಟ್ಟಕ್ಕೆ ಆಟವನ್ನು ಪುನರ್ ನಿರ್ಮಿಸಲು ಸರ್ಕಾರ ಉತ್ಸುಕವಾಗಿದೆ. ಕಳಪೆ ಪ್ರದರ್ಶನಕ್ಕಾಗಿ ಆಟಗಾರರನ್ನು ಟೀಕಿಸುವುದನ್ನು ನಿಲ್ಲಿಸುವಂತೆ ಗಮಗೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ದ್ವೀಪ ರಾಷ್ಟ್ರವು 2014ರ T20 ವಿಶ್ವಕಪ್ ಚಾಂಪಿಯನ್ ಆಗಿತ್ತು. ಜೊತೆಗೆ ಹಿಂದಿನ ಎರಡು ಆವೃತ್ತಿಗಳಲ್ಲಿ ರನ್ನರ್ ಅಪ್ ಆಗಿತ್ತು.
ವಿಶ್ವಕಪ್ನಿಂದ ಹೊರಗುಳಿದ ನಂತರ ಶ್ರೀಲಂಕಾ ನಾಯಕ ದಸುನ್ ಶನಕ, ಆಟಗಾರರು ಎದುರಿಸುತ್ತಿರುವ ಟೀಕೆಗಳ ಬಗ್ಗೆ ದೂರು ನೀಡಿದ್ದರು ಮತ್ತು 'ನಕಾರಾತ್ಮಕತೆ'ಯನ್ನು ನಿಗ್ರಹಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
Advertisement