

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯ ಇಂದು ನಡೆಯುತ್ತಿದ್ದು ಇಂಗ್ಲೆಂಡ್ ಮತ್ತು ಭಾರತ ತಂಡದಳು ಅಂತಿಮ ಹಂತಕ್ಕೇರಲು ಪರಸ್ಪರ ಸೆಣಸುತ್ತಿವೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ 2ನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದ್ದು, ಈ ನಡುವೆ ಈ ಪಂದ್ಯಕ್ಕೆ ಬಳಸುವ ಪಿಚ್ ಕುರಿತ ಕೆಲ ಸಂಗತಿಗಳು ಭಾರತೀಯ ಪಡೆಯಲ್ಲಿ ಆತಂಕ ಹೆಚ್ಚಿಸಿದೆ ಎನ್ನಲಾಗಿದೆ. ವಾಂಖೆಡೆ ಮೈದಾನದ ಪಿಚ್ ಹಸಿರು ಛಾಯೆಯನ್ನು ಹೊಂದಿದ್ದು ಇದು ಭಾರತೀಯ ಬ್ಯಾಟರ್ಗಳಿಗೆ ಆತಂಕ ತಂದಿದೆ.
ಪಿಚ್ ನಲ್ಲಿ ಅಲ್ಪ ಪ್ರಮಾಣದಲ್ಲಿ ಹುಲ್ಲು ಇದ್ದು ಇದು ತೇವಾಂಶವನ್ನು ಹಿಡಿದಿಡುತ್ತದೆ. ಇದು ವೇಗಿಗಳಿಗೆ ನೆರವಾಗಲಿದ್ದು, ಹೆಚ್ಚೆಚ್ಚು ಬೌನ್ಸರ್ ಎಸೆಯಲು ನೆರವಾಗುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಈ ಪಿಚ್ನಲ್ಲಿ ಇಂಗ್ಲೆಂಡ್ ವೇಗಿಗಳು ಅತ್ಯುತ್ತಮವಾಗಿ ದಾಳಿ ಸಂಘಟಿಸಬಹುದು ಎಂದು ಹೇಳಲಾಗುತ್ತಿದೆ.
ಪಿಚ್ ನೋಡಿ ಖುಷಿ ಪಟ್ಟ ಇಂಗ್ಲೆಂಡ್
ಈ ಹಸಿರು ಹೊದಿಕೆ ಇರುವ ಪಿಚ್ ನೋಡಿ ಇಂಗ್ಲೆಂಡ್ ಆಟಗಾರರು ಖುಷಿ ಪಟ್ಟಿರಬಹುದು. ಕಾರಣ ಸಾಮಾನ್ಯವಾಗಿ ಇಂಗ್ಲೆಂಡ್ನ ಬಹುತೇಕ ಪಿಚ್ ಮೇಲ್ಮೈ ಹಸಿರು ಹುಲ್ಲಿನಿಂದ ಕೂಡಿರುತ್ತದೆ. ಹೀಗಾಗಿ ಅಂತಹ ಪಿಚ್ನಲ್ಲಿ ಹೇಗೆ ದಾಳಿ ಸಂಘಟಿಸಬೇಕು, ಹೇಗೆ ಬ್ಯಾಟಿಂಗ್ ನಡೆಸಬೇಕು ಎನ್ನುವುದು ಆಂಗ್ಲರಿಗೆ ಚೆನ್ನಾಗಿ ಗೊತ್ತಿರುತ್ತದೆ.
ಆಟದ ಆರಂಭದಲ್ಲಿ, ಹುಲ್ಲು ಮತ್ತು ಕೆಂಪು ಮಣ್ಣಿನ ನೈಸರ್ಗಿಕ ಗುಣಲಕ್ಷಣಗಳಾದ ಸ್ಥಿರವಾದ ಬೌನ್ಸ್ ಮತ್ತು ಕೆಲವು ಕ್ಯಾರಿಗಳಿಂದಾಗಿ ವೇಗಿಗಳು ಸೀಮ್ ಚಲನೆ ಮತ್ತು ಹೆಚ್ಚುವರಿ ಬೌನ್ಸ್ನಿಂದ ಪ್ರಯೋಜನ ಪಡೆಯಬೇಕು. ವೇಗದ ಬೌಲರ್ಗಳು ಪವರ್ಪ್ಲೇನಲ್ಲಿ ಸೀಮ್ನಿಂದ ಹೊರಗೆ ಚಲನೆಯೊಂದಿಗೆ ಆರಂಭಿಕರಿಗೆ ತೊಂದರೆ ನೀಡಬಹುದು.
ಇನ್ನಿಂಗ್ಸ್ ಮಧ್ಯದಲ್ಲಿ ಸ್ಪಿನ್ನರ್ ಗಳಿಗೆ ನೆರವು
ಅಂತೆಯೇ ಪಂದ್ಯವು ಮಧ್ಯದ ಓವರ್ಗಳಿಗೆ ಸಾಗುತ್ತಿದ್ದಂತೆ, ಮೇಲ್ಮೈ ಸ್ಥಿರವಾಗಬಹುದು, ಇದು ಸ್ಪಿನ್ನರ್ಗಳಿಗೆ ಹಿಡಿತ ಮತ್ತು ತಿರುವು ಪಡೆಯಲು ಅನುವು ಮಾಡಿಕೊಡುತ್ತದೆ.
ವಿಶೇಷವಾಗಿ ಹುಲ್ಲು ಸವೆದುಹೋದರೆ ಅಥವಾ ಪಿಚ್ ಸ್ವಲ್ಪ ಒರಟಾಗಿದ್ದರೆ ಮಾತ್ರ ಚೆಂಡು ತಿರುವು ಪಡೆಯಲಾರಂಭಿಸುತ್ತದೆ. ಹೀಗಾಗಿ ಇಲ್ಲಿ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸಲಿದ್ದು, ಟಾಸ್ ಗೆದ್ದ ತಂಡ ಸಾಮಾನ್ಯವಾಗಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ಇಬ್ಬನಿಯದ್ದೇ ನಿರ್ಣಾಯಕ ಪಾತ್ರ
ಅಂತೆಯೇ ಈ ಪಂದ್ಯದಲ್ಲಿ ಇಬ್ಬನಿಯು ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದ್ದು, 2ನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಇದು ನೆರವಾಗಲಿದೆ. ಮುಂಬೈನ ತಾಪಮಾನಕ್ಕೆ ಪಿಚ್ ಬೇಗನೆ ಒಣಗಿ ಬಿರುಕು ಬಿಡಬಾರದು ಎಂಬ ಕಾರಣಕ್ಕೆ ಐಸಿಸಿ ಕ್ಯುರೇಟರ್ಗಳು ಈ ಬಾರಿ ಹೆಚ್ಚಿನ ಹುಲ್ಲನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡು ಬಾರಿ ಟಿ20 ಪಂದ್ಯಗಳನ್ನು ಆಡಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿವೆ.
Advertisement