

ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಮೂರನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಟೀಂ ಇಂಡಿಯಾಗೆ ಐಸಿಸಿ ಶಾಕ್ ನೀಡಿದ್ದು ತಂಡದ ಸ್ಟಾರ್ ವೇಗಿಗೆ ದುಬಾರಿ ದಂಡ ಹೇರಿದೆ.
ಭಾನುವಾರ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಅರ್ಶ್ ದೀಪ್ ಸಿಂಗ್ಗೆ ಪಂದ್ಯ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ. ಮಾತ್ರವಲ್ಲದೇ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ಐಸಿಸಿ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಅರ್ಶ್ ದೀಪ್ ಸಿಂಗ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ಅನ್ನು ಉಲ್ಲಂಘಿಸಿದ್ದು, ಇದು "ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅನುಚಿತ ಮತ್ತು/ಅಥವಾ ಅಪಾಯಕಾರಿ ರೀತಿಯಲ್ಲಿ ಆಟಗಾರನ ಮೇಲೆ ಅಥವಾ ಹತ್ತಿರ ಚೆಂಡನ್ನು (ಅಥವಾ ಕ್ರಿಕೆಟ್ ಉಪಕರಣಗಳ ಯಾವುದೇ ವಸ್ತು) ಎಸೆಯುವುದಕ್ಕೆ ಸಂಬಂಧಿಸಿದೆ".
ಆಗಿದ್ದೇನು?
ಫೈನಲ್ ಪಂದ್ಯದ ವೇಳೆ ನ್ಯೂಜಿಲೆಂಡ್ ಇನ್ನಿಂಗ್ಸ್ನ 11 ನೇ ಓವರ್ನಲ್ಲಿ ಅರ್ಶ್ ದೀಪ್ ಸಿಂಗ್ ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರತ್ತ ಚೆಂಡನ್ನು ಅಪಾಯಕಾರಿಯಾಗಿ ಎಸೆದಿದ್ದರು. ಅದೃಷ್ಟವಶಾತ್ ಚೆಂಡು ಅವರ ಪ್ಯಾಡ್ ಗೆ ಬಡಿದಿತ್ತು.
ಈ ವೇಳೆ ಮಿಚೆಲ್ ಕೂಡ ಅರ್ಶ್ ದೀಪ್ ಸಿಂಗ್ ರನ್ನು ಗುರಿಯಾಗಿಸಿಕೊಂಡು ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ ಬಳಿಕ ಅರ್ಶ್ ದೀಪ್ ಸಿಂಗ್ ಮಿಚೆಲ್ ಅವರ ಬಳಿ ಕ್ಷಮೆ ಕೋರಿದ ಬಳಿಕ ಇಬ್ಬರೂ ಆಟಗಾರರು ಪರಸ್ಪರ ಕೈ ಕುಲುಕಿ ಸ್ನೇಹ ತೋರ್ಪಡಿಸಿದರು.
ಪಂದ್ಯದ ನಂತರ, ಅರ್ಶ್ ದೀಪ್ ಘಟನೆಯನ್ನು ಪ್ರಸ್ತಾಪಿಸಿ ತಕ್ಷಣ ಮಿಚೆಲ್ಗೆ ಕ್ಷಮೆಯಾಚಿಸಿದ ಕುರಿತು ಸ್ಪಷ್ಟಪಡಿಸಿದರು.
"ನಾನು ಮಿಚೆಲ್ಗೆ ಕ್ಷಮೆಯಾಚಿಸಲು ಹೋಗಿದ್ದೆ. ನನ್ನ ಎಸೆತ ರಿವರ್ಸ್-ಸ್ವಿಂಗ್ ಸ್ವಲ್ಪ ಹೆಚ್ಚಾಗಿತ್ತು ಮತ್ತು ಅದು ಅವನ ದೇಹಕ್ಕೆ ತಗುಲಿತು, ಆದ್ದರಿಂದ ನಾನು ಅವನಿಗೆ ಉದ್ದೇಶಪೂರ್ವಕವಾಗಿ ಹೊಡೆದಿಲ್ಲ ಎಂದು ನಾನು ಅವನಿಗೆ ಹೇಳಿದೆ" ಎಂದು ಪಂದ್ಯದ ನಂತರದ ಪ್ರಶಸ್ತಿ ವಿತರಣೆ ವೇಳೆ ಅರ್ಶ್ದೀಪ್ ಸಿಂಗ್ ಹೇಳಿದರು.
Advertisement