

ಢಾಕಾ: ಐಸಿಸಿ ಟಿ20 ವಿಚಾರವಾಗಿ ಪಾಕಿಸ್ತಾನದ ಮಾತುಕೇಳಿ ಟೂರ್ನಿಯಿಂದ ಹೊರಬಿದ್ದಿದ್ದ ಬಾಂಗ್ಲಾದೇಶಕ್ಕೆ ಕೆಟ್ಟ ಮೇಲೆ ಬುದ್ದಿ ಬಂದಿರುವಂತೆ ಕಾಣುತ್ತಿದೆ.
ಐಪಿಎಲ್ ನಲ್ಲಿ ತನ್ನ ದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ರನ್ನು ಖರೀದಿಸಿ ಬಳಿಕ ಕೈಬಿಟ್ಟ ವಿಚಾರಕ್ಕೆ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಬಾಂಗ್ಲಾದೇಶ ಬಳಿಕ ಭಾರತದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ದೂರ ಉಳಿದಿತ್ತು. ಮಾತ್ರವಲ್ಲದೇ ಬಾಂಗ್ಲಾದೇಶ ಸರ್ಕಾರ, ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿತ್ತು.
ಬಾಂಗ್ಲಾದೇಶದ ದುಡುಕಿನ ನಿರ್ಧಾರದಿಂದ ಆ ದೇಶದ ಕ್ರಿಕೆಟ್ ಬೋರ್ಡ್ ಗೆ ಭಾರಿ ನಷ್ಟ ಉಂಟಾಗಿತ್ತು. ಇದೀಗ ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಬಾಂಗ್ಲಾದೇಶ ಮತ್ತೆ ಭಾರತದ ಜೊತೆ ಸಂಬಂಧ ಸುಧಾರಿಸಿಕೊಳ್ಳುವ ಮಾತನಾಡುತ್ತಿದೆ.
ಹೌದು.. ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರದ ಮೇಲಿನ ನಿಷೇಧವನ್ನು ಹೊಸ ಸರ್ಕಾರ ತೆರವುಗೊಳಿಸುವ ಸಾಧ್ಯತೆ ಇದ್ದು, ಬಾಂಗ್ಲಾದೇಶ ಕ್ರೀಡಾ ಸಚಿವರು ಈದ್ ನಂತರ ಚರ್ಚಿಸುವ ಸುಳಿವು ನೀಡಿದ್ದಾರೆ.
ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್, ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ಐಪಿಎಲ್ ಬ್ಯಾನ್ ನಿರ್ಧಾರವನ್ನು ಮರುಪರಿಶೀಲಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ಬಾಂಗ್ಲಾದೇಶ ಕ್ರೀಡಾ ಸಚಿವ ಹೇಳಿದ್ದೇನು?
ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರದ ಬಗ್ಗೆ ಹೇಳಿಕೆ ನೀಡಿರುವ ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್, ‘ಪ್ರಸ್ತುತ ಐಪಿಎಲ್ ಪ್ರಸಾರದ ಬಗ್ಗೆ ಇನ್ನೂ ಚರ್ಚಿಸಿಲ್ಲ, ಆದರೆ ಈದ್ ರಜಾದಿನಗಳು ಮುಗಿದ ಬಳಿಕ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿದೆ.
ಅಂತೆಯೇ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಐಪಿಎಲ್ ಪ್ರಸಾರದಿಂದ ಬಾಂಗ್ಲಾದೇಶಕ್ಕೆ ಆರ್ಥಿಕ ಲಾಭ ಮತ್ತು ಬಿಸಿಸಿಐ ಜೊತೆ ಸಂಬಂಧ ಸುಧಾರಿಸಲು ಇದು ಉತ್ತಮ ಅವಕಾಶ ಎಂದು ಪರಿಗಣಿಸಲಾಗಿದೆ. ಅಲ್ಲದೆ ಐಪಿಎಲ್ ಪ್ರಸಾರದಿಂದ ಬಾಂಗ್ಲಾದೇಶಕ್ಕೆ ಆರ್ಥಿಕವಾಗಿ ಲಾಭವಾಗುವುದರಿಂದ ಪ್ರಸಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಗಳು ಹೆಚ್ಚಿವೆ.
Advertisement