

ಬೆಂಗಳೂರು: ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬರುವ ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಇಲ್ಲಿ ಎರಡು ಪಂದ್ಯಗಳು ನಡೆಯಲಿವೆ.
ವಿಶ್ವದ ಅತಿ ದೊಡ್ಡ ಐಪಿಎಲ್ T20 ಲೀಗ್ನ 19 ನೇ ಆವೃತ್ತಿಯು ಮಾರ್ಚ್ 28 ರಂದು ಪ್ರಾರಂಭವಾಗುತ್ತದೆ. ವೇಳಾಪಟ್ಟಿಯ ಪ್ರಕಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ. ಏಪ್ರಿಲ್ 5 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಕಟ್ಟುನಿಟ್ಟಾದ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಟಿಕೆಟ್ ಇಲ್ಲದ ಯಾವುದೇ ವ್ಯಕ್ತಿಯನ್ನು ಕ್ರೀಡಾಂಗಣದ ಹತ್ತಿರ ಅಥವಾ ಒಳಗೆ ಪ್ರವೇಶ ನೀಡುವುದಿಲ್ಲ. ಕ್ಯೂಆರ್ ಆಧಾರಿತ ಪ್ರವೇಶ ನಿಯಂತ್ರಣ ಮತ್ತು ಎಲ್ಲಾ ಪ್ರವೇಶ ದ್ವಾರಗಳಲ್ಲಿ ತಪಾಸಣೆ ಸೇರಿದಂತೆ ಬಹು ಆಯಾಮದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಜ ಸಮಯದ ನಿಗಾವಣೆಗಾಗಿ AI ಆಧಾರಿತ ಜನದಟ್ಟಣೆ ವಿಶ್ಲೇಷಣೆಯ 500 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಮತ್ತು ಸ್ಟೇಡಿಯಂ ಕಂಟ್ರೋಲ್ ರೂಮ್ಗಳ ಮೂಲಕ ಕಣ್ಗಾವಲು ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜನರ ಸುರಕ್ಷತೆ ಮತ್ತು ಅವರ ಚಲನವಲನದ ಮೇಲೆ ಗಮನಹರಿಸುವುದರೊಂದಿಗೆ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಕ್ರೀಡಾಂಗಣದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಕ್ರೀಡಾಂಗಣಕ್ಕೆ ಆಗಮಿಸಬೇಕು ಮತ್ತು ಟಿಕೆಟ್ಗಳು ಸಂಪೂರ್ಣವಾಗಿ ಡಿಜಿಟಲ್ ಆಗಿವೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಮಾನ್ಯವಾದ ಟಿಕೆಟ್ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಟಿಕೆಟ್ ಇಲ್ಲದ ಜನರು ಕ್ರೀಡಾಂಗಣದಲ್ಲಿ ಮತ್ತು ಸುತ್ತಮುತ್ತ ಸೇರಲು ಅನುಮತಿಸಲ್ಲ. ಕ್ರೀಡಾಂಗಣಕ್ಕೆ ಬರುವವರಿಗಾಗಿ ಸೂಕ್ತ ಪಾರ್ಕಿಂಗ್ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಸಂಚಾರ ದಟ್ಟಣೆ ತಡೆಯಲು ಜನರು ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳನ್ನು ಬಳಸಬೇಕೆಂದು ಅವರು ಒತ್ತಾಯಿಸಿದರು.
ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಮಿತಿಯ ಶಿಫಾರಸುಗಳ ಪ್ರಕಾರ 9 ಆಂಬ್ಯುಲೆನ್ಸ್ಗಳು ಮತ್ತು ನಾಲ್ಕು ವೈದ್ಯಕೀಯ ತಂಡಗಳನ್ನು ಕ್ರೀಡಾಂಗಣದ ಬಳಿ ನಿಯೋಜಿಸಲಾಗಿದೆ. ಪ್ರತಿಯೊಬ್ಬರೂ ಈ ಪಂದ್ಯಗಳನ್ನು ಜವಾಬ್ದಾರಿಯುತವಾಗಿ ಎಂಜಾಯ್ ಮಾಡಬೇಕು ಮತ್ತು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಬಯಸುತ್ತೇವೆ. ಇದರಿಂದ ಉತ್ತಮ ಸುರಕ್ಷಿತ ವಾತಾವರಣವನ್ನು ಒದಗಿಸಬಹುದು ಎಂದು ಸಿಂಗ್ ಹೇಳಿದರು.
ಕ್ರೀಡಾಂಗಣಕ್ಕೆ ನಿರ್ಬಂಧಿತ ವಸ್ತುಗಳನ್ನು ಸಾಗಿಸುವುದನ್ನು ಮತ್ತು ಕ್ರೀಡಾಂಗಣದ ಬಳಿ ಅಡ್ಡಾಡುವುದನ್ನು ನಿಷೇಧಿಸಲಾಗಿದೆ. ಪಂದ್ಯ ಆರಂಭಕ್ಕೂ 4 ಗಂಟೆ ಮುಂಚಿತವಾಗಿ ಕ್ರೀಡಾಂಗಣಕ್ಕೆ ಬರಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪಂದ್ಯ ವೀಕ್ಷಣೆಗೆ ಬರುವ ಮುನ್ನಾ ಕ್ಯೂರ್ ಆಧಾರಿತ ಟಿಕೆಟ್ ಇಟ್ಟುಕೊಳ್ಳಲು ಸೂಚಿಸಲಾಗಿದೆ. ಕಳೆದ ವರ್ಷ ಜೂನ್ ನಲ್ಲಿ ಆರ್ ಸಿಬಿ ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರಿಂದ ಈ ಬಾರಿ ಭಾರಿ ಬಂದೋಬಸ್ತ್ ಮಾಡಲಾಗಿದೆ.
Advertisement