

ರಾಯಪುರ: ಭಾನುವಾರ ನಡೆದ ಮುಂಬೈ ವಿರುದ್ಧದ ರೋಚಕ ಐಪಿಎಲ್ ಪಂದ್ಯದಲ್ಲಿ ಆಲ್ ರೌಂಡರ್ ಕೃನಾಲ್ ಪಾಂಡ್ಯ ಅವರ ಅದ್ಬುತ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ ಗೆಲುವು ಸಾಧಿಸಿತು.
ಮುಂಬೈ ನೀಡಿದ 167 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಜತ್ ಪಾಟಿದಾರ್ ನೇತೃತ್ವದ ಕೇವಲ 5.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭದಲ್ಲಿ ಸಂಕಷ್ಟದಲ್ಲಿತ್ತು. ಆದರೆ ಕೃನಾಲ್ ಪಾಂಡ್ಯ 46 ಎಸೆತಗಳಲ್ಲಿ 73 ರನ್ ಗಳಿಸಿ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣರಾದರು. ಕೊನೆಯ ಎಸೆತದಲ್ಲಿ ಆರ್ ಸಿಬಿ ಗೆಲ್ಲಲು ಎರಡು ರನ್ ಗಳ ಅಗತ್ಯವಾಗಿತ್ತು. ಅದನ್ನು ಪಡೆಯುವಲ್ಲಿ ಯಶಸ್ವಿಯಾಯಿತು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟಿದಾರ್, ಈಗ ಇದು ಸಾಮಾನ್ಯ ಎಂದು ನಾನು ಭಾವಿಸುತ್ತೇನೆ. ಆದರೆ ತುಂಬಾ ಬಿಗಿಯಾದ ಪಂದ್ಯವಾಗಿತ್ತು. ಒಟ್ಟಾರೆಯಾಗಿ ಅತ್ಯುತ್ತಮ ಪಂದ್ಯವಾಗಿತ್ತು. ವಿಶೇಷವಾಗಿ ಕೃನಾಲ್ ಪಾಂಡ್ಯ ತಂಡಕ್ಕಾಗಿ ಅತ್ಯುತ್ತಮ ಆಟ ಆಡಿದ್ದಾರೆ ಎಂದರು.
ಕೃನಾಲ್ ಅವರನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಲಾಯಿತು. ಇದು ನಮ್ಮ ನಿರ್ಧಾರ ವಾಗಿತ್ತು. ತಂಡದ ಸಭೆಯಲ್ಲಿ ಇದರ ಚರ್ಚಿಸಲಾಗಿತ್ತು. ಅವರು ಆಡಿದ ರೀತಿ ನಮಗೆ ತಿಳಿದಿತ್ತು. ಈ ಹಿಂದೆ ಕೂಡಾ ಐದನೇ ಕ್ರಮಾಂಕದಲ್ಲಿ ಆಡಿದ್ದರು.ಹೀಗಾಗಿ ಅದೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಿದ್ದೇವು. ಅದನ್ನು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ವೇಗಿ ಭುವನೇಶ್ವರ್ ಕುಮಾರ್ 23 ರನ್ ಗಳಿಗೆ 4 ವಿಕೆಟ್ ಗಳಿಸುವ ಮೂಲಕ ಬೌಲಿಂಗ್ ನಲ್ಲಿ ನಿಯಂತ್ರಣ ಸಾಧಿಸಿದರು. ಇದು ಸೂಪರ್ ಆಗಿತ್ತು ಎಂದು ಪಾಟಿದಾರ್ ತಿಳಿಸಿದರು.
ಈಗ ನಾವು ಪಾಯಿಂಟ್ ಟೇಬಲ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಏಕೆಂದರೆ, ಪಾಯಿಂಟ್ ಟೇಬಲ್ ನೋಡುವುದಕ್ಕಿಂತ ನಮ್ಮ ಸಾಮರ್ಥ್ಯದ ಮೇಲೆ ಆಡುವುದು ಮತ್ತು ಉತ್ತಮ ಕ್ರಿಕೆಟ್ ಆಡುವುದು ನಮ್ಮ ಮಂತ್ರವಾಗಿದೆ. ಬೌಲರ್ಗಳು ಅಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಭಾವಿಸುತ್ತೇನೆ. ಅವರನ್ನು 166 ಕಟ್ಟಿಹಾಕುವುದು ಸುಲಭದ ಕೆಲಸವಲ್ಲ. ನಮ್ಮಲ್ಲಿರುವಂತಹ ಪ್ರತಿಭಾವಂತ ಬ್ಯಾಟಿಂಗ್ ಪಡೆಯು ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಬೇಕಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಗೆದ್ದಿರಬಹುದು. ಆದರೆ ಆಡಿದ ರೀತಿಗೆ ನಾವು ಈ ಗೆಲುವಿಗೆ ಅರ್ಹರಲ್ಲ. ಪರಿಸ್ಥಿತಿ ಯಾವುದೇ ಇರಲಿ, ಇಂತಹ ಮೊತ್ತವನ್ನು ನಾವು ಸುಲಭವಾಗಿ ಚೇಸ್ ಮಾಡಬೇಕಿತ್ತು ಎಂದರು.
Advertisement