

ಧರ್ಮಶಾಲಾ: ಐಪಿಎಲ್ ಟೂರ್ನಿಯ ಇಂದಿನ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ 23 ರನ್ ಗಳ ಹೀನಾಯ ಸೋಲುಕಂಡ ಬಳಿಕ ತಂಡದ ಪ್ರದರ್ಶನ ಕುರಿತು ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಭಾವುಕ ಹೇಳಿಕೆ ನೀಡಿದ್ದಾರೆ.
ಇಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ನಡೆದ ಬೆಂಗಳೂರು ತಂಡ ನೀಡಿದ್ದ 223 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 23 ರನ್ ಗಳ ಅಂತರದ ಹೀನಾಯ ಸೋಲುಕಂಡಿತು. ಈ ಹೀನಾಯ ಸೋಲಿನ ಬಳಿಕ ಪಂಜಾಬ್ ತಂಡದ ಪ್ಲೇಆಫ್ ಕನಸು ಬಹುತೇಕ ಛಿದ್ರವಾಗಿದೆ.
ಹಾಲಿ ಟೂರ್ನಿಯಲ್ಲಿ ಪಂಜಾಬ್ ಗೆ ಇದು ಸತತ ಆರನೇ ಸೋಲಾಗಿದೆ. ಈ ಸೋಲಿನಿಂದ ಪ್ಲೇಆಫ್ ಕನಸುಗಳಿಗೆ ಭಾರೀ ಹೊಡೆತ ಬಿದ್ದಿದೆ. ಇದೇ ಕಾರಣಕ್ಕಾಗಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ತಮ್ಮ ತಂಡದ ಪ್ರದರ್ಶನ ಕುರಿತು ಮಹತ್ತರ ಹೇಳಿಕೆ ನೀಡಿದ್ದಾರೆ.
ಆರ್ಸಿಬಿ ಆರಂಭವೇ ಪಂದ್ಯದ ತಿರುವು
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್ ಧೈರ್ಯ ಮತ್ತು ತಾತ್ವಿಕ ಮನೋಭಾವ ವ್ಯಕ್ತಪಡಿಸಿದರು. ಆರ್ಸಿಬಿಯ ಸ್ಫೋಟಕ ಆರಂಭವೇ ಪಂದ್ಯದ ತಿರುವಾಗಿತ್ತು. ಪವರ್ಪ್ಲೇ ನಂತರ ಬೆಂಗಳೂರು ತಂಡ ಬೌಲರ್ಗಳ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿತು ಎಂದರು.
“ಅವರು ಅತ್ಯುತ್ತಮ ಆರಂಭ ಪಡೆದರು ಮತ್ತು ಪವರ್ಪ್ಲೇ ನಂತರ ಹಿಡಿತ ಸಾಧಿಸಿ ನಮ್ಮ ಬೌಲರ್ಗಳ ಮೇಲೆ ದಾಳಿ ಆರಂಭಿಸಿದರು. 222 ರನ್ ತಲುಪುವುದು ಅವರ ಅದ್ಭುತ ಪ್ರದರ್ಶನವಾಗಿತ್ತು. ನಾವು ಬೌಲಿಂಗ್ನಲ್ಲಿ ಹೆಚ್ಚು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಪಂದ್ಯ ಪವರ್ಪ್ಲೇಯಲ್ಲೇ ಸೋತಂತಾಯಿತು' ಎಂದು ಅಯ್ಯರ್ ಅಭಿಪ್ರಾಯಪಟ್ಟರು.
ಟಾಪ್ ಆರ್ಡರ್ ವೈಫಲ್ಯ
ಅಂತೆಯೇ ಟಾಪ್ ಆರ್ಡರ್ ಉತ್ತಮ ಆರಂಭ ನೀಡಲು ವಿಫಲವಾದುದು ತಂಡಕ್ಕೆ ದೊಡ್ಡ ಹೊಡೆತವಾಯಿತು. ನಾವು ಮೂರು ವಿಕೆಟ್ ಕಳೆದುಕೊಂಡಿದ್ದೆವು. ನಮ್ಮ ಪ್ರಮುಖ ರನ್ ಸ್ಕೋರರ್ ಗಳಾದ ಪ್ರಭ್ಸಿಮ್ರನ್ ಮತ್ತು ಪ್ರಿಯಾಂಶ್ ಆಗಿದ್ದರು. ಅವರು ಸಾಮಾನ್ಯವಾಗಿ ಪವರ್ಪ್ಲೇಯಲ್ಲಿ ನೀಡುವ ಆರಂಭ ಈ ಬಾರಿ ಸಿಗಲಿಲ್ಲ. ನಾನು ಕೂಡ ಬೇಗ ಔಟಾದೆ” ಎಂದರು.
ಇದೇ ವೇಳೆ ಸೋಲಿನ ನಡುವೆಯೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಹೋರಾಟವನ್ನು ಅಯ್ಯರ್ ಶ್ಲಾಘಿಸಿದರು.
“ತೀವ್ರ ನಿರಾಶೆಯಾಗಿದೆ. ಆದರೆ ಶಶಾಂಕ್, ಸ್ಟೋಯಿನಿಸ್ ಮತ್ತು ಮಧ್ಯಮ ಕ್ರಮಾಂಕದ ಇತರ ಆಟಗಾರರ ಪ್ರದರ್ಶನ ಶ್ಲಾಘನೀಯವಾಗಿತ್ತು. ನಾವು ಸುಮಾರು ಓವರ್ಗೆ 10 ರನ್ ವೇಗದಲ್ಲಿ ಸಾಗುತ್ತಿದ್ದೆವು. ಆದರೆ ಕೊನೆಯಲ್ಲಿ ಗುರಿ ತಲುಪಲಿಲ್ಲ. ಭುವಿ ಮತ್ತು ಹೇಜಲ್ವುಡ್ ಅದ್ಭುತವಾಗಿ ಬೌಲಿಂಗ್ ಮಾಡಿದರು' ಎಂದು ಹೇಳಿದರು.
ಫಲಿತಾಂಶದಿಂದ ಮನೋಭಾವ ಬದಲಾಗಲ್ಲ
ಸತತ ಆರು ಸೋಲುಗಳಿಂದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಅವಕಾಶಗಳು ಬಹುತೇಕ ಕ್ಷೀಣಿಸಿದರೂ, ಫಲಿತಾಂಶಗಳು ತಮ್ಮ ವ್ಯಕ್ತಿತ್ವ ಅಥವಾ ಮನೋಭಾವವನ್ನು ಬದಲಾಯಿಸುವುದಿಲ್ಲ ಎಂದು ಅಯ್ಯರ್ ಸ್ಪಷ್ಟಪಡಿಸಿದರು.
“ಖಂಡಿತವಾಗಿಯೂ ಅಲ್ಲ. ಫಲಿತಾಂಶ ಏನೇ ಇರಲಿ ನಾನು ಸದಾ ಧನಾತ್ಮಕವಾಗಿರುತ್ತೇನೆ. ಅದು ನನ್ನ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ನಾನು ಯಾವಾಗಲೂ ಬಲವಾದ ಮನೋಭಾವದೊಂದಿಗೆ ಮುಂದೆ ಸಾಗುತ್ತೇನೆ,” ಎಂದು ಹೇಳಿದರು.
ಮತ್ತೆ ಸೂರ್ಯೋದಯ
ಇದೇ ವೇಳೆ “ನಾನು ಕಳೆದ ವಿಚಾರಗಳ ಬಗ್ಗೆ ಹೆಚ್ಚು ಯೋಚಿಸುವ ವ್ಯಕ್ತಿಯಲ್ಲ. ಇದು ಮುಗಿದಿದೆ, ಆಗಿ ಹೋಗಿದೆ. ನಾಳೆ ಮತ್ತೆ ಸೂರ್ಯೋದಯವಾಗುತ್ತದೆ. ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ,” ಎಂದು ಅಯ್ಯರ್ ಮಾರ್ಮಿಕವಾಗಿ ಹೇಳಿದರು.
Advertisement