ನೇತ್ರದಾನ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ವರನಟ ಡಾ. ರಾಜ್ಕುಮಾರಂತೆ ನಾನು ನೇತ್ರದಾನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಕನ್ನಡ ಚಿತ್ರೋಧ್ಯಮ ಮತ್ತು ಡಾ. ರಾಜ್ಕುಮಾರ್ ಅವರ ಅಭಿಮಾನಿಗಳ ಬಹುದಿನಗಳ ಕನಸಾಗಿದ್ದ ಡಾ. ರಾಜ್ಕುಮಾರ್ ಸ್ಮಾರಕವನ್ನು ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಕುಮಾರಂತೆ ನಾನು ನೇತ್ರದಾನ ಮಾಡುತ್ತೇನೆ. ಆ ಮೂಲಕ ರಾಜ್ಕುಮಾರ್ಗೆ ಗೌರವ ಸಲ್ಲಿಸುತ್ತೇನೆ. ಅಲ್ಲದೆ ಇದೇ ವೇದಿಕೆ ಮೇಲೆ ನೇತ್ರದಾನ ಪತ್ರಕ್ಕೂ ಸಹಿ ಹಾಕಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ ರಾಜ್ಕುಮಾರ್ ಅವರು ನಮ್ಮದೇ ಜಿಲ್ಲೆಯವರು ಎಂದು ಹೇಳುವುದಕ್ಕೆ ನನಗೆ ಹೆಮ್ಮೆಯಾಗುತ್ತದೆ. ರಾಜ್ಕುಮಾರ್ ಅದ್ವಿತೀಯ ಕಲಾವಿದರು. ಅವರು ನಿರ್ವಹಿಸದ ಪಾತ್ರವಿಲ್ಲ. ಆಡು ಮುಟ್ಟದ ಸೋಪ್ಪಿಲ್ಲ ಅಂತೆ ರಾಜ್ ಅಭಿನಯಿಸದ ಪಾತ್ರವಿಲ್ಲ ಎಂದರು. ನಾಟಕ, ಪೌರಾಣಿಕ, ಸಾಮಾಜಿಕ ಅಲ್ಲದೆ ಬಾಂಡ್ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಕುಮಾರ್ಗೆ ಅವರೇ ಸಾಟಿ, ತಮ್ಮ ನಟನೆ ಮೂಲಕವೇ ರಾಜ್ ಎಲ್ಲರನ್ನು ಆಕರ್ಷಿಸಿದ್ದಾರೆ. ನಟನೆಯ ಮೂಲಕ ಅವರು ಉತ್ತಮ ಸಾಮಾಜಿಕ ಮೌಲ್ಯಗಳನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ರಾಜ್ಕುಮಾರ್ ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ಓರ್ವ ನಟರಾಗಿ ಅಲ್ಲದೆ ನಾಡು, ನುಡಿಗೆ ಸಂಬಂಧಿಸಿದ ಗೋಕಾಕ್ ಚಳುವಳಿಯ ಹೋರಾಟದಲ್ಲಿ ಧುಮುಕಿ ಹೋರಾಟಕ್ಕೆ ಹೊಸ ಕಿಚ್ಚು ತಂದುಕೊಟ್ಟಂತ ಜನನಾಯಕ ಎಂದು ಸಿದ್ದರಾಮಯ್ಯ ಅವರು ಕೊಂಡಾಡಿದ್ದರು.

