ಬೆಂಗಳೂರು: ಬಿಬಿಎಂಪಿ ವಿಭಜನೆಗೆ ರಾಜ್ಯ ಸರ್ಕಾರ ಹೊರಡಿಸಲು ನಿರ್ಧರಿಸಿರುವ ಸುಗ್ರೀವಾಜ್ಞೆ ತಿರಸ್ಕರಿಸಿ ಎಂದು ರಾಜ್ಯಪಾಲ ವಿ.ಆರ್.ವಾಲಾಗೆ ರಾಜ್ಯ ಬಿಜೆಪಿ ಘಟಕ ಒತ್ತಾಯಿಸಲು ನಿರ್ಧರಿಸಿದೆ. ಇದರ ಜತೆಗೆ `ಅಖಂಡ ಕರ್ನಾಟಕ, ಅಖಂಡ ಬೆಂಗಳೂರು' ಹೋರಾಟವನ್ನೂ ಕೈಗೊಳ್ಳಲು ತೀರ್ಮಾನಿಸಿದೆ.
ಬಿಬಿಎಂಪಿ ವಿಭಜನೆ ಹಾಗೂ ಚುನಾವಣೆಗೆ ಸರ್ಕಾರ ಪ್ರಕಟಿಸಿರುವ ಕರಡು ಮೀಸಲು ಪಟ್ಟಿ ಬಗ್ಗೆ ಚರ್ಚಿಸಲು, ಮಂಗಳವಾರ ಮಲ್ಲೇಶ್ವರದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಸೇರಿದಂತೆ ಹಲವು ನಾಯಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬಿಬಿಎಂಪಿ ವಿಭಜಿಸುವ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್ ನಿರ್ದೇಶನ ಅಡ್ಡಿಯಾಗಿತ್ತು. ಮೀಸಲು ಪಟ್ಟಿ ಪ್ರಕಟಿಸಿ ಶೀಘ್ರ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಇದಕ್ಕೆ ಮೇಲ್ಮನವಿ ಹೋಗುವ ನಿರ್ಧಾರ ಕೈಗೊಂಡಿದ್ದ ಸರ್ಕಾರ ಮುನ್ನೆಚ್ಚರಿಕೆ ಎಂಬಂತೆ ವಿಭಜನೆಗೆ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನವನ್ನೂ ಕೈಗೊಂಡಿತ್ತು. ಆದರೆ ಈ ಸುಗ್ರೀವಾಜ್ಞೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ ಮಾಡಲಿದೆ.
ಕಾನೂನು ಹೋರಾಟ
ಬಿಜೆಪಿ ಸದಸ್ಯರಿಗೆ ತೊಡಕಾಗುವಂತೆ ಮೀಸಲು ಪಟ್ಟಿ ತಯಾರಿಸಿದ ಸರ್ಕಾರದ ಕ್ರಮದ ವಿರುದ್ಧವೂ ಕಾನೂನು ಹೋರಾಟ ಕೈಗೊಳ್ಳಲು ಬಿಜೆಪಿ ಮುಂದಾಗಿದೆ. ಮೇಯರ್ ಶಾಂತಕುಮಾರಿ, ಮಾಜಿ ಮೇಯರ್ ಹಾಗೂ ಪ್ರಮುಖ ಸದಸ್ಯರು ಸ್ಪರ್„ಸಲು ತೊಡಕಾಗುವಂತೆ ಸರ್ಕಾರ ಮೀಸಲು ಪಟ್ಟಿ ಮಾಡಿದೆ. ಇದಕ್ಕೆ ಕಾನೂನು ಹೋರಾಟದ ಮೂಲಕವೇ ಉತ್ತರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.
ಮೀಸಲು ಪಟ್ಟಿ ಪ್ರಕಟಿಸಿದ ಸರ್ಕಾರ ಮಹಿಳಾ ಮೀಸಲು ಹಾಗೂ ಹಿಂದುಳಿದ ವರ್ಗಗಳ ಮೀಸಲು ಮೂಲಕ ಹಲವು ಹಾಲಿ ಬಿಜೆಪಿ ಸದಸ್ಯರು ಸ್ಪರ್„ಸದಂತೆ ತಂತ್ರ ಹೂಡಿದೆ. ಹೀಗಾಗಿ ಕಾನೂನು ಹೋರಾಟದ ಮೂಲಕವೇ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು. ಶಾಸಕರಾದ ವಿಜಯಕುಮಾರ್, ಅರವಿಂದ ಲಿಂಬಾವಳಿ, ರವಿಸುಬ್ರಹ್ಮಣ್ಯ, ಮಾಜಿ ಸಚಿವ ವಿ.ಸೋಮಣ್ಣ, ಎಂಎಲ್ಸಿ ರಾಮಚಂದ್ರೇಗೌಡ, ಜಯನಗರ ಶಾಸಕ ವಿಜಯಕುಮಾರ್, ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಸಭೆಯಲ್ಲಿ ಹಾಜರಿದ್ದರು.
Advertisement