ಬೆಂಗಳೂರು: "ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜೂಜು ಅಡ್ಡೆಗಳಲ್ಲಿ ಹಣ ಒಡ್ಡಿ ಆಡುವ ಆಟಕ್ಕೆ ಕಡಿವಾಣ ಹಾಕಬೇಕು. ಆದರೆ ಕಾಯ್ದೆಗೆ ತಿದ್ದುಪಡಿ ತರುವ ಹಿಂದೆ ದೊಡ್ಡ ಮಟ್ಟದಲ್ಲಿ ಲಾಬಿ ನಡೆಯುತ್ತಿದ್ದು ಸರ್ಕಾರಕ್ಕೆ ಗಟ್ಸ್ ಇಲ್ಲದಂತಾಗಿದೆ".
ಇದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛಿಮಾರಿ ಹಾಕಿದ ಪರಿ. ತಮ್ಮ ನಿವಾಸದಲ್ಲಿ ಹಣ ಒಡ್ಡಿ ಅಂದರ್ ಬಾಹರ್ ಆಡುತ್ತಿದ್ದ ಆರೋಪದಲ್ಲಿ ತೀರ್ಥಹಳ್ಳಿ ಪೊಲೀಸರು ಸ್ಥಳೀಯರಾದ ಗುಂಡುರಾವ್ ಸೇರಿ 17 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೊಲೀಸರು ದಾಖಲಿಸಿದ ಪ್ರಕರಣ ರದ್ದುಪಡಿಸುವಂತೆ ಕೋರಿ ಈ 17 ಜನ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾ.ಎ.ಎನ್ ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, ಈ ರೀತಿ ಕಾನೂನು ಬಾಹಿರವಾಗಿ ಆಟದಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಾಗುತ್ತದೆ ಅಷ್ಟೆ. ತದನಂತರ ನ್ಯಾಯಾಲಯದ ಮೆಟ್ಟಿಲೇರಿದಾಗ ಪ್ರಕರಣ ಖುಲಾಸೆಗೊಳ್ಳುತ್ತಿದೆ. ಜೂಜು ಅಡ್ಡೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಕಾಯ್ದೆ 1963 , ಸೆಕ್ಷನ್ 79 ಮತ್ತು 80 ಕ್ಕೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಸಾಕಷ್ಟು ಸಲ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ಆದರೆ ಸರ್ಕಾರ ಮಾತ್ರ ಕೋರ್ಟ್ ನ ಈ ಆದೇಶ ಪಾಲಿಸುತ್ತಿಲ್ಲ. ಪೊಲೀಸರು ಅಷ್ಟೇ ದೊಡ್ಡ ಹೋಟೆಲ್ ಗಳ ಮೇಲೆ ದಾಳಿ ಮಾಡಲು ಧೈರ್ಯವೇ ಮಾಡುವುದಿಲ್ಲ. ಅವರು ಏನಿದ್ದರೂ ಸಣ್ಣಪುಟ್ಟ ಹೋಟೆಲ್ ಅಥವಾ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಾರೆ. ದಾಳಿ ನಡೆಸಿ ಪ್ರಯೋಜನ ಇಲ್ಲದ ಮೇಲೆ ಕಾಯ್ದೆಯಲ್ಲಿನ ಸೆಕ್ಷನ್ ಅನ್ನು ಅಳಿಸಿಹಾಕಿ ಇಲ್ಲವಾದಲ್ಲಿ ಕಾಯ್ದೆಗೆ ತಿದ್ದುಪಡಿ ತನ್ನಿ ಎಂದು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಈ ವಿಚಾರದಲ್ಲಿ ಜೂಜಾಟಕ್ಕೆ ಕಡಿವಾಣ ಹಾಕಲು ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ತರುವ ಕುರಿತು ರಾಜ್ಯ ಸರ್ಕಾರದ ನಿಲುವೇನು ಎಂಬುದು ಮೂರು ವಾರದ ಒಳಗಾಗಿ ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು. ಜೂಜು ಅಡ್ಡೆಗಳಲ್ಲಿ ಜೂಜು ಆಡಿ ಸಿಕ್ಕಿಬಿದ್ದರು ತಾಂತ್ರಿಕ ಕಾರಣ ಮತ್ತು ಸರ್ಕಾರದ ಕುರುಡು ಪ್ರದರ್ಶನದಿಂದ ಜೂಜಾಟದಲ್ಲಿ ಭಾಗಿಯಾದವರು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ.
Advertisement