ರಸ್ತೆಗಳಲ್ಲಿ ಸುಮಾರು 80 ಟನ್ ಕಸ ವಿಲೇವಾರಿಯಾಗದ್ದರಿಂದ ನಗರ ಗಬ್ಬು ನಾರುತ್ತಿದೆ, ರಸ್ತೆ ಗುಂಡಿ ದುರಸ್ತಿಗೆ ರು.614 ಕೋಟಿ ವ್ಯರ್ಥ ವೆಚ್ಚ...
ಬೆಂಗಳೂರು: ಕಸ ವಿಲೇವಾರಿ ಹಾಗೂ ರಸ್ತೆಗುಂಡಿ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು `ಗುಂಡಿ ಮುಚ್ಚಿರಿ, ಕಸ ತೆಗೆಯರಿ' ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶನಿವಾರ ಬನ್ನಪ್ಪ ಪಾರ್ಕ್ನಿಂದ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದವರೆಗೆ ಮೆರವಣಿಗೆ ನಡೆಸಿದ ಮುಖಂಡರು, ಕಾಂಗ್ರೆಸ್ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತದ ವಿರುದ್ಧ ಘೋಷಣೆ ಕೂಗಿದರು. ನಗರ ರಸ್ತೆಗಳ ಬದಿಯಲ್ಲಿ ಸುಮಾರು 80 ಸಾವಿರ ಟನ್ ಕಸ ವಿಲೇವಾರಿಯಾಗದೆ ಬಿದ್ದಿದೆ. ಇದರ ಜೊತೆಗೆ ರಸ್ತೆಗುಂಡಿಯ ಸಮಸ್ಯೆ ಸೇರಿ ನಗರ ಗಬ್ಬು ನಾರುತ್ತಿದೆ. ಸರ್ಕಾರ ಹಾಗೂ ಬಿಬಿಎಂಪಿ ಸೇರಿದಂತೆ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಆರ್.ಅಶೋಕ ಮಾತನಾಡಿ, ಹಿಂದಿನ ಉಸ್ತುವಾರಿ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರು ರಸ್ತೆಗುಂಡಿಗಳನ್ನು ಮುಚ್ಚಿ ಖಾಲಿ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಉಸ್ತುವಾರಿ ಸ್ಥಾನದಿಂದ ಅವರೇ ಖಾಲಿಯಾಗಿದ್ದಾರೆ. ಎಲ್ಲ ಕಡೆಗಳಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ಸರ್ಕಾರ ದುರಸ್ತಿ ಮಾಡುತ್ತಿಲ್ಲ. ರಸ್ತೆ ಗುಂಡಿ ಮುಚ್ಚಲು ರು. 614 ಕೋಟಿ ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್ ಆಡಳಿತ ಲೆಕ್ಕ ಹೇಳಿದೆ. ಆದರೆ 600 ಗುಂಡಿಗಳನ್ನೂ ಮುಚ್ಚಲು ಸಾಧ್ಯವಾಗಿಲ್ಲ. ಒಂದೊಂದು ಗುಂಡಿ ಮುಚ್ಚಿಸಲು ಒಂದು ಕೋಟಿ ವ್ಯರ್ಥ ಮಾಡಿದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ನಲಿದ್ದರೂ ಎಲ್ಲ ಸಮಸ್ಯೆಗೂ ಬಿಜೆಪಿ ಕಾರಣ ಎಂದು ದೂರುತ್ತಿದ್ದಾರೆ. ಕಳೆದ ಬಾರಿಯ ಬಿಜೆಪಿ ಸರ್ಕಾರದಿಂದಲೇ ಕಸದ ಸಮಸ್ಯೆಯಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು. ಶ್ವೇತಪತ್ರ ಹೊರಡಿಸಿ: ಬಿಬಿಎಂಪಿಯಿಂದ ನಿತ್ಯ ಕಸ ವಿಲೇವಾರಿಯಾಗದೆ ಎಲ್ಲ ಕಸ ನಗರದೊಳಗೇ ಉಳಿಯುತ್ತಿದೆ. ಪ್ರತಿ ಘಟಕಕ್ಕೆ ನಿತ್ಯ ಕಳುಹಿಸುತ್ತಿರುವ ಲಾರಿ, ಮುಚ್ಚಿರುವ ರಸ್ತೆಗುಂಡಿಗಳು, ಕಾಮಗಾರಿಗಾಗಿ ಖರ್ಚು ಮಾಡಿದ ಹಣ ಸೇರಿದಂತೆ ಎಲ್ಲ ಮಾಹಿತಿಗಳನ್ನು ಜನರ ಮುಂದೆ ಇಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ ಮಾತನಾಡಿ, ಸರ್ಕಾರಕ್ಕೆ ದೂರದೃಷ್ಟಿ ಹಾಗೂ ಇಚ್ಛಾಶಕ್ತಿ ಇಲ್ಲ. ಗುಂಡಿ ಹಾಗೂ ಕಸದಿಂದ ನಗರ ಹಾಳಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಧಿಕಾರಿಗಳೇ ದರ್ಬಾರು ನಡೆಸುತ್ತಿದ್ದಾರೆ. ಕೆ.ಜೆ.ಜಾರ್ಜ್ ನಗರಾಭಿವೃದ್ಧಿ ಸಚಿವರಾದ ಬಳಿಕ ನಗರದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು ನಿರ್ಭೀತಿಯಿಂದ ಸಂಚರಿಸಲು ಸಾಧ್ಯವಾಗದೆ ಅಂತಾರಾಷ್ಟ್ರೀ ಯ ಮಟ್ಟದ ನಗರದ ಖ್ಯಾತಿ ಕುಸಿ ಯುತ್ತಿದೆ ಎಂದರು. ಶಾಸಕ ಅರವಿಂದ ಲಿಂಬಾವಳಿ, ಪದ್ಮನಾಭರೆಡ್ಡಿ, ಸಂಸದ ಪಿ.ಸಿ.ಮೋಹನ್ ಹಾಜರಿದ್ದರು.
Advertisement