ಬೆಂಗಳೂರು: ಅವರಿಬ್ಬರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅವರ ಪ್ರೀತಿಗೆ ಒಂದು ಪುಟ್ಟ ಹೆಣ್ಣು ಮಗು. ಮನೆ, ಮನಗಳಲ್ಲಿ, ಬಡಾವಣೆಯಲ್ಲಿ ಎಲ್ಲರನ್ನು ನಗಿಸಿಕೊಂಡು ಓಡಾಡಿಕೊಂಡಿದ್ದ ದುಂಡು ಮುಖ ಕಂದಮ್ಮನಿಗೆ 3 ವರ್ಷ. ಇನ್ನು 10 ದಿನ ಕಳೆದಿದ್ದರೆ ಈ ಪುಟ್ಟಗೌರಿ 3 ವರ್ಷ ತುಂಬಿ 4ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಆದರೆ, ಈ ಪುಟ್ಟ ಸಂಸಾರಕ್ಕೆ ಶುಕ್ರವಾರ ಶುಭವಾಗಲಿಲ್ಲ...
ಬೆಳ್ಳಂಬೆಳ್ಳಗೆ ಜವರಾಯ ಮನೆ ಮುಂದೆಯೇ ಯಮಪಾಶವಿಡಿದು ನಿಂತಿದ್ದ. ಆಗ ತಾನೇ ಎದ್ದು ನೇಸರನನ್ನು ನೋಡಲು ಮನೆಯಿಂದ ಹೊರ ಬಂದಿದ್ದ ಮಗುವಿನ ಪ್ರಾಣ ಪಕ್ಷಿಯನ್ನು ಯಮ, ಕ್ಯಾಬ್ ರೂಪದಲ್ಲಿ ಬಂದು ಕ್ಷಣಾರ್ಧದಲ್ಲಿ ಹಾರಿಸಿಕೊಂಡು ಹೋಗಿದ್ದಾನೆ! ತಾವೇ ಜನ್ಮ ಕೊಟ್ಟ ಮಗಳನ್ನು ರಕ್ತದ ಮಡುವಿನಲ್ಲಿ ಕಂಡ ಮುರುಗನ್ ಹಾಗೂ ರಂಜಿತ ದಂಪತಿ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಇಡೀ ಬಡಾವಣೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಈ ಹೃದಯವಿ ದ್ರಾವಕ ಘಟನೆ ನಡೆದದ್ದು ನೇಕಲ್ ತಾಲೂಕಿನ ಹೆಬ್ಬಗೋಡಿಯ ದಾದಿರೆಡ್ಡಿ ಬಡಾವಣೆಯಲ್ಲಿ.
ಮನೆ ಬಾಗಿಲಲ್ಲಿ ನಿಂತಿದ್ದ ಕಂದನನ್ನು ಓಲಾ ಟ್ರಾವೆಲ್ಸ್ ನ ಟಾಟಾ ಇಂಡಿಕಾ ಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಆಸೀನಿ ಶುಕ್ರವಾರ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕ್ಯಾಬ್ ಚಾಲಕ ಅಜಿತ್ ಕಾರು ತಿರುಗಿಸಿಕೊಂಡು ಹೋಗುವಾಗ ಅತೀ ವೇಗವಾಗಿ ಕಾರನ್ನು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. ಈ ಅಪಘಾತ ಮಾಡುವ ಮೊದಲು ಇದೇ ಬಡಾವಣೆಯ ಓರ್ವ ಅಜ್ಜಿಗೂ ಆತ ಡಿಕ್ಕಿ ಹೊಡೆದು ನಂತರ ಮಗುವಿಗೆ ಡಿಕ್ಕಿ ಹೊಡೆದಿದ್ದಾನೆ. ಅಜ್ಜಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
Advertisement