ಬಿಬಿಎಂಪಿ ಸುರಿಯುತ್ತಿರುವ ಕಸಕ್ಕೆ ಕನ್ನಳ್ಳಿ, ಸೀಗೇಹಳ್ಳಿ ಗ್ರಾಮಸ್ಥರ ಗೋಳು; ಕಸ ಸುರಿಯುದನ್ನು ಇನ್ನಾದರೂ ನಿಲ್ಲಿಸಲು ಆಗ್ರಹ
ಬೆಂಗಳೂರು: ``ಬಿಬಿಎಂಪಿ ತಂದು ಸುರಿಯುತ್ತಿರುವ ಕಸ ಕೊಳೆತು ನಾರುತ್ತಿದೆ. ಬೆಂಗಳೂರಿನ ಕಸವನ್ನು ಈ ರೀತಿ ತಂದು ಸುರಿಯುತ್ತಿರುವುದರಿಂದ ದುರ್ವಾಸನೆ ಎಲ್ಲೆಡೆ ಪಸರಿಸಿದೆ. ಹೀಗಾಗಿ ಗ್ರಾಮದಲ್ಲಿ ವಾಸಿಸುವುದೇ ಕಷ್ಟವಾಗಿದ್ದು, ಗ್ರಾಮ ತೊರೆಯುವ ವಲಸೆ ಹೋಗುವ ಪರಿಸ್ಥಿತಿ ಉದ್ಭವವಾಗಿದೆ.''
ಯಶವಂತಪುರ ಕ್ಷೇತ್ರಕ್ಕೆ ಸೇರುವ ಕನ್ನಳ್ಳಿ ಮತ್ತು ಸೀಗೇಹಳ್ಳಿಯಲ್ಲಿ ಬಿಬಿಎಂಪಿ ಸುರಿಯುತ್ತಿರುವ ಕಸದಿಂದಾಗಿ ಅಲ್ಲಿನ ಜನರು ಎದುರಿಸುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ಕಸ ವಿಲೇವಾರಿ ಘಟಕ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಚನ್ನಪ್ಪ ಅವರು ತೋಡಿಕೊಂಡ ಪರಿಯಿದು. ``ಕಸದ ರಾಶಿ ಗಬ್ಬೆದ್ದು ನಾರುತ್ತಿರುವುದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಈ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಬಾರದು'' ಎಂದು ಅಳಲು ತೋಡಿಕೊಂಡರು.
ಹೀಗಾಗಿ ಬಿಬಿಎಂಪಿ ಕಸ ಹಾಕುತ್ತಿರುವ ಕ್ರಮ ವಿರೋಧಿಸಿ ಕನ್ನಳ್ಳಿ, ಸೀಗೇಹಳ್ಳಿ ಕಸ ವಿಲೇವಾರಿ ಘಟಕ ವಿರೋಧಿ ಹೋರಾಟ ಸಮಿತಿಯು ಡಿ.21ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಂಗಳೂರಿ ನಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ಸಂಸ್ಕರಣೆಗಾಗಿ ಬಿಬಿಎಂಪಿ ಸುಮಾರು 100 ವಾರ್ಡ್ಗಳಿಂದ ಬರುವ ಹೋಟೆಲ್, ಐಟಿ ಕಂಪನಿಗಳು, ಕಲ್ಯಾಣ ಮಂಟಪಗಳು, ಆಸ್ಪತ್ರೆಗಳ ತ್ಯಾಜ್ಯ ಸಂಗ್ರಹಿಸಿ ಸೀಗೇಹಳ್ಳಿಗೆ ಸೇರಿದ ಸುಮಾರು 30 ಎಕರೆ ಪ್ರದೇಶದಲ್ಲಿ ತಂದು ಸುರಿಯಲಾಗುತ್ತಿದೆ. ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗಗಳಿಂದ ನರಳುವಂತಾಗಿದೆ ಎಂದು ಚನ್ನಪ್ಪ ಆರೋಪಿಸಿದ್ದಾರೆ.
ಸುತ್ತಮುತ್ತಲ ಸುಮಾರು 10 ಖಾಸಗಿ ಶಾಲಾ ಕಾಲೇಜುಗಳಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದು ನೆಲೆಸಿ, ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರನ್ನು ನೋಡಲು ಬಂದ ಪೋಷಕರು ಇಲ್ಲಿರುವ ಸ್ಥಿತಿ ಗಮನಿಸಿ ಅವರನ್ನು ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗು ತ್ತಿಲ್ಲ. ಖಾಸಗಿ ಕಂಪನಿಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸ್ಥಿತಿಯೂ ಕಷ್ಟದಲ್ಲಿ ಸಿಲುಕಿದೆ ಎಂದು ವಾಸ್ತವ ಪರಿಸ್ಥಿತಿ ಬಿಚ್ಚಿಟ್ಟರು.
ಸಭೆ ನಡೆಸಿದರೂ ಪ್ರಯೋಜನವಿಲ್ಲ:
ಘಟಕ ಪ್ರಾರಂಭಿಸುವ ಮೊದಲು ಅಕ್ಕಪಕ್ಕದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಶಾಸಕರು, ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರಿಗೆ ಬೇರೆ ದೇಶದಲ್ಲಿ ಅಧ್ಯಯನ ಮಾಡಿ ಬಂದ ತಜ್ಞರಿಂದ ಕಂಪನಿ ಪ್ರಾರಂಭಿಸುತ್ತಿದ್ದಾರೆ. ಇದರಿಂದ ಸ್ವಲ್ಪವೂ ವಾಸನೆ ಬರುವುದಿಲ್ಲವೆಂದು ನಂಬಿಸಿದ್ದರು.
ಸಾರ್ವಜನಿಕರು ಇದೆಲ್ಲವನ್ನೂ ವಿರೋಧಿಸಿ ನಂತರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಸಭೆ ನಡೆಸಿದ್ದಾರೆ. ಅಲ್ಲದೆ, ಶಾಸಕ ಎಸ್.ಟಿ. ಸೋಮಶೇಖರ್ ಅವರಲ್ಲಿ ಮನವಿ ಮಾಡಿಕೊಂಡ ನಂತರ ಅವರು ಭೇಟಿ ನೀಡಿ ಘಟಕಕ್ಕೆ ಬರುವ ತ್ಯಾಜ್ಯವನ್ನು ನಿಲ್ಲಿಸಿದ್ದರು. ನಂತರ ಮತ್ತೆ ಕಸ ಹಾಕಲು ಬಿಬಿಎಂಪಿ ಆರಂಭಿಸಿದೆ ಎಂದು ತಿಳಿಸಿದರು.
ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ವಿರೋಧಿಸಿ ಡಿ.21ರ ಬೆಳಗ್ಗೆ 9 ಗಂಟೆಗೆ ಸ್ಥಳೀಯರು, ಗ್ರಾಪಂ ಸದಸ್ಯರು ಹಾಗೂ ವಿದ್ಯಾರ್ಥಿಗಳು ಸೇರಿ ತಾವರೆಕೆರೆ ಮತ್ತು ನೈಸ್ ರಸ್ತೆ ಮಧ್ಯದಲ್ಲಿ ರುವ ಸೀಗೇಹಳ್ಳಿ ಗೇಟ್ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಪ್ರೊ.ರಾಮಚಂದ್ರ ಭಟ್, ಬಿ.ಎಲ್. ಮೋಹನ್ರಾಜ್ ಹಾಜರಿದ್ದರು.
Advertisement