ಬೆಂಗಳೂರು: ಪತ್ನಿ ಹಾಗೂ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಎಂ.ಎಸ್.ಪಾಳ್ಯ ಬಳಿಯ ಸಾಯಿನಗರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಸಾಯಿನಗರದ ಸಂಭ್ರಮ್ ಇಂಜಿನಿಯರಿಂಗ್ ಕಾಲೇಜಿನ ಹಿಂಬದಿಯ ಪಾಳು ಮನೆಯೊಂದರಲ್ಲಿದ್ದ ಈ ಜೋಡಿಯನ್ನು ರೊಚ್ಚಿಗೆದ್ದ ಪತಿ ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಹತ್ಯೆಗೀಡಾದವರು 38 ವರ್ಷದ ಮಹಿಳೆ ಪಾಪಚ್ಚಿ ಅಲಿಯಾಸ್ ಪಾರ್ವತಿ ಹಾಗೂ ಆಕೆಯ ಪ್ರಿಯಕರ 40 ವರ್ಷದ ಗಣೇಶ್ ಎಂದು ಗುರುತಿಸಲಾಗಿದೆ.
ಗಣೇಶ್ ಮತ್ತು ಪಾಪಚ್ಚಿ ಅನೈತಿಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದ್ದು ,ಇದರಿಂದ ಆಕ್ರೋಷಿತನಾದ ಪಾಪಚ್ಚಿಯ ಪತಿ ರಾಜು ಕೊಲಗೈದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆರೋಪಿ ಪತಿ ರಾಜುವನ್ನು ವಿದ್ಯಾರಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
20 ವರ್ಷದ ಹಿಂದೆ ರಾಜು ಅವರನ್ನು ಮದುವೆಯಾಗಿದ್ದ ಪಾರ್ವತಿಗೆ ಒಂದು ಗಂಡು ಹಾಗೂ ಎರಡು ಹೆಣ್ಣುಮಕ್ಕಳಿವೆ. ಇತ್ತ ಗಣೇಶ್ ಕೂಡ ನಾಗರತ್ನ ಎಂಬುವವರನ್ನು ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಈ ಎರಡೂ ಕುಟುಂಬಗಳು ಒಂದೇ ಕಡೆ ವಾಸಿಸುತ್ತಿದ್ದವು,
ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಗಣೇಶ್ ಹಾಗೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಪಾಪಚ್ಚಿ ನಡುವೆ ಕಳೆದ 15 ವರ್ಷಗಳಿಂದ ಪರಿಚಯವಿದ್ದು, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ.
Advertisement