ಸಂಚಾರಕ್ಕೆ ಹೋಂಗಾರ್ಡ್ಸ್ ನಿಯೋಜನೆ ಸರಿಯೇ?

ಗೃಹರಕ್ಷಕ ದಳದವರನ್ನು ಬೆಂಗಳೂರು ನಗರದ ಸಂಚಾರ ನಿರ್ವಹಣೆಗೆ ಬಳಸಿಕೊಳ್ಳುವುದು ಸರಿ ಯೇ ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಎಲ್. ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ...
ಟ್ರಾಫಿಕ್ ನಿಯಂತ್ರಣದಲ್ಲಿ ನಿರತ ಹೋಮ್ ಗಾರ್ಡ್ಸ್ (ಸಂಗ್ರಹ ಚಿತ್ರ)
ಟ್ರಾಫಿಕ್ ನಿಯಂತ್ರಣದಲ್ಲಿ ನಿರತ ಹೋಮ್ ಗಾರ್ಡ್ಸ್ (ಸಂಗ್ರಹ ಚಿತ್ರ)

ಬೆಂಗಳೂರು: ಗೃಹರಕ್ಷಕ ದಳದವರನ್ನು ಬೆಂಗಳೂರು ನಗರದ ಸಂಚಾರ ನಿರ್ವಹಣೆಗೆ ಬಳಸಿಕೊಳ್ಳುವುದು ಸರಿ ಯೇ ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಎಲ್. ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಗೃಹರಕ್ಷಕದಳದ ವತಿಯಿಂದ  ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಗೃಹರಕ್ಷಕರ ವೃತ್ತಿಪರ  ಹಾಗೂ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು,  ಬೆಂಗಳೂರು ನಗರದಲ್ಲಿ ಶೇ. 33 ರಷ್ಟು ಮಂದಿ ಅಸ್ತಮಕ್ಕೆ ತುತ್ತಾಗಿದ್ದಾರೆ. ಈ ನಡುವೆ ಅತ್ಯಂತ ಕಡಿಮೆ ಸಂಬಳ ಪಡೆಯುತ್ತಿರುವ ಗೃಹರಕ್ಷಕ ದಳದವರನ್ನು ಸಂಚಾರ ನಿರ್ವಹಣೆಗೆ ಬಳಸಿಕೊಂಡರೆ ಅಸ್ತಮಕ್ಕೆ ಗುರಿ ಮಾಡಿದಂತಾಗುವುದಿಲ್ಲವೆ? ಮಾಡದ ತಪ್ಪಿಗೆ ಅವರು ನಿರಪರಾಧಿಯಾಗಿ ಅಸ್ತಮಕ್ಕೆ ಗುರಿಯಾಗಬೇಕೆ? ಅವರ  ಅನಾರೋಗ್ಯಕ್ಕೆ ಯಾರು ಹೊಣೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಂತಿಯ ಸಂಕೇತವಾದ ಗೃಹ ರಕ್ಷಕದಳದವರು ಸ್ವಯಂ ಪ್ರೇರಿತವಾಗಿ ಬಂದು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಗೆ ಸಂಬಳ ಎನ್ನದೆ ಗೌರವ  ಧನ  ನೀಡಲಾಗುತ್ತಿದೆ. ಇವತ್ತಿನ ದಿನದಲ್ಲಿ  ಗೌರವಧನ ಪಡೆದು ಮೆಟ್ರೋ ಸಿಟಿಯಲ್ಲಿ ಜೀವಿಸುವುದು ಕಷ್ಟಸಾಧ್ಯ. 1964 ರಿಂದ ಆರಂಭವಾದ ಗೃಹ ರಕ್ಷಕದಳವರ ಶಿಸ್ತು ಶ್ಲಾಘನೀಯ. ಅವರ ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅವಶ್ಯಕವಾಗಿದ್ದು ಈ ಕ್ರೀಡೆ ಹೆಚ್ಚು ಉತ್ಸಾಹ ತರಲಿ ಎಂದು ಕೃಷ್ಣಮೂರ್ತಿ ಆಶಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್. ಪಾಲಯ್ಯ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಖಾಲಿ  ಇರುವ 170 ಹುದ್ದೆಗಳಿಗೆ ಗೃಹರಕ್ಷಕ ದಳದವರನ್ನು ನೇಮಿಸಿ ಸಂಚಾರ ನಿರ್ವಹಣೆಗೆ ನಿಯೋಜಿಸಲಾಗಿದೆ.

ನಮಗೂ ಈ ಯೋಚನೆ ಹೊಳಿದಿರಲಿಲ್ಲ. ಕೃಷ್ಣಮೂರ್ತಿ ಅವರ ಮಾತುಗಳನ್ನು ಕೇಳಿದ ಬಳಿಕ ಸಂಚಾರ ನಿರ್ವಹಣೆಗೆ ಇವರ ನಿಯೋಜನೆ ಸರಿಯೇ ಎಂಬ ಪ್ರಶ್ನೆ ಮೂಡುತ್ತಿದೆ. ಈ ಬಗ್ಗೆ  ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಪ್ರಸಾರ  ಭಾರತಿಯ ಹೆಚ್ಚುವರಿ ಮಹಾ ನಿರ್ದೇಶಕ ಡಾ. ಮಹೇಶ್ ಜೋಶಿ, ಪ್ರಾಜೆಕ್ಟ್ ಮ್ಯಾನೇಜರ್, ಖಜಾನೆ 2  ಉಪ ನಿರ್ದೇಶಕ ಪುರುತ್ತಮ್ ಸಿಂಗ್, ಜಿಲ್ಲಾ ಕಮಾಂಡೆಂಟ್ ಬಿ.ಅಮರನಾಥ್ ಉಪಸ್ಥಿತರಿದ್ದರು.

1964 ರಿಂದಲೂ ಗೃರಕ್ಷಕ ದಳದವರ ಕವಾಯಿತಿಗೆ ಕೇವಲ ರು.22 ಭತ್ಯೆ ನೀಡಲಾಗುತ್ತಿದೆ. ಬೈಲಾದಲ್ಲಿನ ಈ ನಿಯಮ ತಿದ್ದುಪಡಿಯಾಗಿ ಜೀವನಾಶ್ಯಕತೆಗೆ ತಗಲುವ ಭತ್ಯೆ ನೀಡುವಂತಾಗಲಿ.
-ಬಿ. ಅಮರನಾಥ್, ಜಿಲ್ಲಾ ಕಮಾಂಡೆಂಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com