ಬೆಂಗಳೂರು: ನಟ ದರ್ಶನ್ ಮಾಲೀಕತ್ವದ ಕಾರು ಚಾಲಕನ ವಿರುದ್ಧ ಮೂರು ಪ್ರಕರಣ ದಾಖಲಿಸಿರುವ ಹೈಗ್ರೌಂಡ್ ಸಂಚಾರ ಪೊಲೀಸರು ರು.300 ದಂಡ ವಿಧಿಸಿದ್ದಾರೆ.
ಆದರೆ, ಇದು ನಟ ದರ್ಶನ್ ಅವರ ಕಾರು, ನಾನು ದಂಡ ಕಟ್ಟುವುದಿಲ್ಲ ಎಂದು ಚಾಲಕ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾನೆ. ಯಾರಾದರೂ ಸರಿ ತಪ್ಪು ತಪ್ಪೇ ಎಂದು ಪೊಲೀಸರು ದಂಡ ವಿಧಿಸಿ ರಸೀದಿ ನೀಡಿದ್ದಾರೆ. ರಸೀದಿ ಪಡೆದ ಚಾಲಕ ದಂಡವನ್ನು ಸ್ಥಳದಲ್ಲಿ ಕಟ್ಟುವ ಬದಲು ನ್ಯಾಯಲಯದಲ್ಲಿ ಕಟ್ಟುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾನೆ.
ಸೋಮವಾರ ಜೆಡಿಎಸ್ ಕಚೇರಿ ಬಳಿ ಈ ಡ್ರಾಮ ನಡೆದಿದ್ದು, ಲಕ್ಷ್ಮಣ್ ಪೊಲೀಸರು ವಿರುದ್ಧ ಹರಿಹಾಯ್ದ ಚಾಲಕ ಎನ್ನಲಾಗಿದೆ.
ಘಟನೆ: ನಟ ದರ್ಶನ್ ಅಭಿನಯದ ಅರ್ಜನ್ ಅವರ ನಿರ್ದೇಶನದ ಐರಾವತ ಚಿತ್ರದ ಚಿತ್ರೀಕರಣ ಜೆಡಿಎಸ್ ಕಚೇರಿಯಲ್ಲಿ ನಡೆಯುತ್ತಿತ್ತು. ಆದರೆ, ಈ ವೇಳೆ ದರ್ಶನ್ ಅಲ್ಲಿರಲಿಲ್ಲ. ಕೆಲಸ ನಿಮಿತ್ತ ಮೈಸೂರಿಗೆ ಹೋಗಿದ್ದ ಅವರು, ಮಧ್ಯಾಹ್ನ ಬರುವುದಾಗಿ ತಿಳಿಸಿದ್ದರು. ಹೀಗಾಗಿ ಚಾಲಕ, ಸಹನಟ ಲಕ್ಷ್ಮಣ್ ಆಡಿ ಕಾರನ್ನು (ಕೆಎ1 51 ಝಡ್ 7999) ತೆಗೆದುಕೊಂಡು ಬಂದಿದ್ದರು. ಆದರೆ ಆ ವಾಹನವನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಅದನ್ನು ಕಂಡ ಪೊಲೀಸರು ದಂಡ ವಿಧಿಸಲು ಮುಂದಾದಾಗ ಕಾರಿನಲ್ಲಿ ಟಿಂಟೆಡ್ ಗಾಜು ಇತ್ತು. ಅದಕ್ಕೆ ಹಾಗೂ ಡಿಫೆಕ್ಟಿವ್ ನಂಬರ್ ಪ್ಲೇಟ್ ಅನ್ನು ಗುರುತಿಸಿ ತಲಾ ರು.100 ಸೇರಿ ರು.300 ದಂಡ ವಿಧಿಸಿದ್ದಾರೆ. ಇತ್ತೀಚೆಗೆ ಬನಶಂಕರಿ ಸಂಚಾರ ಪೊಲೀಸರು ನಟ ದುನಿಯಾ ವಿಜಯ್ ಅವರ ಕಾರಿನಲ್ಲಿ ಟಿಂಟೆಡ್ ಗಾಜು ಇದ್ದ ಕಾರಣ ದಂಡ ವಿಧಿಸಿದ್ದರು.
Advertisement