ಕನ್ನಡದ ಹಿರಿಯ ಸಂಶೋಧಕ ಹಾಗೂ ಲೇಖಕ ಪ್ರೊ. ಎಸ್. ವಿದ್ಯಾಶಂಕರ್
ಕನ್ನಡದ ಹಿರಿಯ ಸಂಶೋಧಕ ಹಾಗೂ ಲೇಖಕ ಪ್ರೊ. ಎಸ್. ವಿದ್ಯಾಶಂಕರ್

ಸಂಶೋಧಕ ಪ್ರೊ. ಎಸ್. ವಿದ್ಯಾಶಂಕರ್ ಇನ್ನಿಲ್ಲ

ವಚನಸಾಹಿತ್ಯಕ್ಕೆ ಸಂಶೋಧನೆಯ ಮೆರುಗು ಹಾಗೂ ನಂಬಿದ ಸಿದ್ದಾಂತಕ್ಕಾಗಿ ಬಂಡಾಯ ಏಳುತ್ತಿದ್ದ ಕನ್ನಡದ ಹಿರಿಯ ಸಂಶೋಧಕ ಹಾಗೂ ಲೇಖಕ ಪ್ರೊ. ಎಸ್. ವಿದ್ಯಾಶಂಕರ್ (68) ನಿಧನರಾದರು. ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕಿಡ್ನಿ ವೈಫಲ್ಯದಿಂದಾಗಿ...
Published on

ಬೆಂಗಳೂರು: ವಚನಸಾಹಿತ್ಯಕ್ಕೆ ಸಂಶೋಧನೆಯ ಮೆರುಗು ಹಾಗೂ ನಂಬಿದ ಸಿದ್ದಾಂತಕ್ಕಾಗಿ ಬಂಡಾಯ ಏಳುತ್ತಿದ್ದ ಕನ್ನಡದ ಹಿರಿಯ ಸಂಶೋಧಕ ಹಾಗೂ ಲೇಖಕ ಪ್ರೊ. ಎಸ್. ವಿದ್ಯಾಶಂಕರ್ (68) ನಿಧನರಾದರು. ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕಿಡ್ನಿ ವೈಫಲ್ಯದಿಂದಾಗಿ ಬುಧವಾರ ರಾತ್ರಿ 9 ಗಂಟೆಗೆ ಮೃತರಾದರು.

ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಚಾಮರಾಜಪೇಟೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ
ನಡೆಯಲಿದೆ. ಪ್ರೊ.ಎಸ್. ವಿದ್ಯಾಶಂಕರ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕರಾಗಿದ್ದರು. ಜೊತೆಗೆ, ಶೈಕ್ಷಣಿಕ ಮಂಡಳಿಯ ಸದಸ್ಯ
ರಾಗಿಯೂ ಕೆಲಸ ನಿರ್ವಹಿಸಿದ್ದರು. ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದವರಾಗಿದ್ದ ಪ್ರೊ.ವಿದ್ಯಾಶಂಕರ್, ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂ.ಎ. ಪದವಿ ಪಡೆದರು.

`ವೀರಶೈವ ಪುರಾಣ ' ಇವರ ಪಿಎಚ್.ಡಿ.ಪ್ರಬಂಧವಾಗಿತ್ತು. `ನಂಬಿಯಣ್ಣ: ಒಂದು ಅಧ್ಯಯನ', `ವಚನಾನುಶೀಲ', `ನೆಲದ ಮರೆಯ ನಿದಾನ', `ವೀರಶೈವ ಸಾಹಿತ್ಯ- ಚರಿತ್ರೆ' ನಾಲ್ಕು ಸಂಪುಟ, `ಭೀಮಕವಿಯ ಬಸವಪುರಾಣ' ಸೇರಿದಂತೆ ಹಲವಾರು ಗ್ರಂಥ ಗಳನ್ನು ರಚಿಸಿದ್ದರು. ಅಂಬಿಗರ ಚೌಡಯ್ಯ ಹಾಗೂ ಸಿದ್ದರಾಮಯ್ಯನವರ ವಚನಗಳನ್ನೂ ಸಂಪಾದಿಸಿದ್ದರು. ಸುಮಾರು 100 ಕೃತಿಗಳನ್ನು ಅವರು ರಚಿಸಿದ್ದು, ಈ ಪೈಕಿ ವೀರಶೈವ ತತ್ವಕ್ಕೆ ಸಂಬಂಧಿಸಿದ ಕೃತಿಗಳೇ ಹೆಚ್ಚು. `ಭುವನದ ಭಾಗ್ಯ' ಅವರ ಪ್ರಮುಖ ಕೃತಿ. ಪ್ರಿಯದರ್ಶಿನಿ ಪ್ರಕಾಶನದ ಅಡಿಯಲ್ಲಿ ಹಲವಾರು ಪ್ರಮುಖ ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ ಅವರು, ವೀರಶೈವ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದರು. ಸ್ವಪ್ನಲೋಕ
ಹೆಸರಿನ ಸಾಹಿತ್ಯ ಪತ್ರಿಕೆಯನ್ನೂ ನಡೆಸುತ್ತಿದ್ದರು. ಕಾವ್ಯಾನಂದ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಪ್ರೊ. ಎಸ್. ವಿದ್ಯಾಶಂಕರ್ ತಮ್ಮ ನಂಬಿಕೆಗೆ ತಕ್ಕಂತೆ ಬದುಕಿದವರು.

ದಾಸಿಮಯ್ಯ ವಿವಾದ

ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಬೇರೆಬೇರೆ. ದೇವರ ದಾಸಿಮಯ್ಯ ಶಿವಭಕ್ತ. ಆದರೆ, ಜೇಡರ ದಾಸಿಮಯ್ಯ ವಚನಗಳನ್ನು ರಚಿಸಿದ ಶರಣ ಎಂದು ಪ್ರತಿಪಾದಿಸುತ್ತಿದ್ದ ಪ್ರೊ.ಎಸ್. ವಿದ್ಯಾಶಂಕರ್, ಈ ಕುರಿತಂತೆ ಸರ್ಕಾರದ ನಿಲುವಿನ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈವರ್ಷದ ಮಾರ್ಚ್ 25ರಂದು ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಡೆದಿದ್ದ ದೇವರ ದಾಸಿಮಯ್ಯ ಸಭೆಯಲ್ಲಿ ಈ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರೊ.ಎಸ್. ವಿದ್ಯಾಶಂಕರ, ಪ್ರೊ. ಎಂ.ಚಿದಾನಂದಮೂರ್ತಿ, ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಹಾಗೂ ಇತರರನ್ನು ಪೊಲೀಸರು ಒತ್ತಾಯದಿಂದ ಹೊರಗೆ ಕಳಿಸಬೇಕಾಗಿತ್ತು. ನಿಜವಾದ ಶರಣನನ್ನು ಮರೆತು, ಶಿವಭಕ್ತನನ್ನು ಶರಣನೆಂದು ಜಯಂತಿ ಆಚರಿಸುವುದು ಸರಿಯಲ್ಲ ಎಂಬುದು ಅವರ ವಾದವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com