ಬೆಂಗಳೂರು: ನಟ, ನಿರ್ದೇಶಕ ಎಸ್.ನಾರಾಯಣ್ ಅವರ ಕಾರಿನಿಂದ ಬುಧವಾರ ಕಳವಾಗಿದ್ದ ಸೂಟ್ಕೇಸ್ ಬ್ಯಾಟರಾಯನಪುರ ಪೊಲೀಸ್ ಠಾಣೆ ಸಮೀಪದ ಫುಟ್ಪಾತ್ನಲ್ಲಿ ಪತ್ತೆಯಾಗಿದೆ. ಆದರೆ, ಅನಾಥವಾಗಿ ಬಿದ್ದಿದ್ದ ಸೂಟ್ಕೇಸ್ ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿತ್ತು.
ಗುರುವಾರ ಬೆಳಗ್ಗೆ ಉಗ್ರ ಯಾಕೂಬ್ ಮೆನನ್ ಗೆ ಗಲ್ಲು ವಿಧಿಸುವ ಕಾರಣ ನಗರದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದರು. ಇತ್ತ ಬೆಳಗ್ಗೆ 6.50ರ ವೇಳೆಗೆ ಬ್ಯಾಟರಾಯನಪುರದ ಚಿಗುರು ಆಸ್ಪತ್ರೆ ಹತ್ತಿರದ ಫುಟ್ ಪಾತ್ ನಲ್ಲಿ ಸೂಟ್ ಕೇಸ್ ಪತ್ತೆಯಾಗಿದೆ. ವಾರಸುದಾರರಿಲ್ಲದ ಸೂಟ್ ಕೇಸ್ ಕಂಡ ಸ್ಥಳೀಯರು, ಅದರಲ್ಲಿ ಬಾಂಬ್ ಇಟ್ಟಿರಬಹುದು ಎನ್ನುವ ಭೀತಿಯಿಂದ ಬ್ಯಾಟರಾಯನಪುರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಕೂಡಲೇ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುವಿಲ್ಲ ಎಂಬುದು ಖಚಿತವಾದ ನಂತರ ಸೂಟ್ ಕೇಸ್ ಒಡೆದಾಗ ಅದರಲ್ಲಿ ಎಸ್.ನಾರಾಯಣ್ ಅವರ ಭಾವಚಿತ್ರ ಗುದ್ದ ಗುರುತಿನ ಚೀಟಿ, ಚೆಕ್ ಬುಕ್ ಹಾಗೂ ಎರಡು ಖಾಲಿ ಹಾಳೆಗಳು ಸಿಕ್ಕಿವೆ. ಹೀಗಾಗಿ, ಅವುಗಳನ್ನು ವಿಜಯನಗರ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾಗಿ ಬ್ಯಾಟರಾಯನಪುರ ಪೊಲೀಸರು ತಿಳಿಸಿದ್ದಾರೆ.
ಹಣ ಮತ್ತು ಕಥೆ ಮಾತ್ರ ಕಳವಾಯಿತಾ?:
ಸೂಟ್ಕೇಸ್ಲ್ಲಿ ರು.3.80 ಲಕ್ಷ ನಗದು ಮತ್ತು ಸಿನೆಮಾ ಕಥೆ ಇತ್ತು. ಸೂಟ್ಕೇಸ್ ನಂಬರ್ ಲಾಕ್ ಮಾಡಿದ್ದೆ ಎಂದು ಎಸ್.ನಾರಾಯಣ್ ತಮ್ಮ ದೂರಿನಲ್ಲಿ ಹೇಳಿದ್ದರು. ಆದರೆ, ಸೂಟ್ ಕೇಸ್ ಪತ್ತೆಯಾದಾಗ ಅದರಲ್ಲಿ ಹಣ ಹಾಗೂ ಕಥೆ ಇಲ್ಲ. ಕೇವಲ ಗುರುತಿನ ಚೀಟಿ ಮತ್ತು ಚೆಕ್ ಬುಕ್ಗಳು ಮಾತ್ರ ಸಿಕ್ಕಿವೆ. ಲಾಕ್ ಆಗಿದ್ದರೆ ಸೂಟ್ಕೇಸ್ ಒಡೆದೇ ಹಣ ಕಳವು ಮಾಡಬೇಕಿತ್ತು. ಆದರೆ, ಆರೋಪಿಗಳು ಸೂಟ್ಕೇಸ್ ಒಡೆಯದೇ ಹಣ ಮತ್ತು ಕಥೆ ಮಾತ್ರ ಕದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ನಾರಾಯಣ್ ಅವರು, ಸೂಟ್ ಕೇಸ್ಗೆ ಲಾಕ್ ಮಾಡುವುದನ್ನು ಮರೆತಿದ್ದೆ ಅನಿಸುತ್ತದೆ. ಇದರಿಂದ ಆರೋಪಿಗಳಿಗೆ ಹಣ ಮತ್ತು ಕಥೆ ಕಳವು ಮಾಡಲು ಸಾಧ್ಯವಾಗಿದೆ. ಎಂದು ಹೇಳಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರು ಚಾಲಕ ರವಿಶಂಕರ್ ಮೇಲೆ ಶಂಕೆ ವ್ಯಕ್ತವಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಳ್ಳತನ ನಡೆದ ಫೆಡರಲ್ ಬ್ಯಾಂಕ್ ಮುಂಭಾಗ ಸಿಸಿ ಕ್ಯಾಮೆರಾ ಇದೆ. ವಿಡಿಯೋ ನೀಡುವಂತೆ ಬ್ಯಾಂಕ್ನವರಿಗೆ ಸೂಚಿಸಲಾಗಿದೆ. ವಿಡಿಯೋ ಕೈ ಸೇರಿದ ಬಳಿಕ ಆರೋಪಿಗಳ ಸುಳಿವು ಸಿಗಲಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
Advertisement