ಕ್ಯಾಬ್ ಡಿಕ್ಕಿ: ಸ್ಥಳದಲ್ಲೇ ವ್ಯಕ್ತಿ ಸಾವು

ಮದುವೆ ಆಹ್ವಾನ ಪತ್ರಿಕೆ ನೀಡಲು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ರಸ್ತೆ ಕಾಡಿಗೇನಹಳ್ಳಿ ಗೇಟ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ...
ಏರ್ ಪೋರ್ಟ್  ಕ್ಯಾಬ್ ( ಸಾಂದರ್ಭಿಕ ಚಿತ್ರ)
ಏರ್ ಪೋರ್ಟ್ ಕ್ಯಾಬ್ ( ಸಾಂದರ್ಭಿಕ ಚಿತ್ರ)

ಬೆಂಗಳೂರು: ಮದುವೆ ಆಹ್ವಾನ ಪತ್ರಿಕೆ ನೀಡಲು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕ್ಯಾಬ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಳ್ಳಾರಿ ರಸ್ತೆ ಕಾಡಿಗೇನಹಳ್ಳಿ ಗೇಟ್ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ವಿಜಯಪುರ ನಿವಾಸಿ ವೀರಪ್ಪ (50) ಮೃತ ದುರ್ದೈವಿ. ಸಹೋದರಿ ಮಗನ ಮದುವೆ ಆಮಂತ್ರಣ ಪತ್ರಿಕೆ ನೀಡಲು ಸೋಮವಾರ ಚಿಕ್ಕಜಾಲದ ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ ಅಲ್ಲೇ ಉಳಿದುಕೊಂಡು ಬೆಳಗ್ಗೆ ಊರಿಗೆ ವಾಪಸ್ಸಾಗಲು ರಸ್ತೆ ದಾಟುತ್ತಿದ್ದಾಗ ಏರ್ ಪೋರ್ಟ್ ಕಡೆಯಿಂದ ಬಂದ ಕ್ಯಾಬ್ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಚಾಲಕ ನಾರಾಯಣಸ್ವಾಮಿ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡ್ಡಾದಿಡ್ಡಿ ಬೈಕ್ ಚಾಲನೆ: ಸವಾರ ಬಲಿ

ಬೆಂಗಳೂರು: ಮತ್ತೊಂದು ಪ್ರಕರಣದಲ್ಲಿ ಸೋಮವಾರ ರಾತ್ರಿ ಆರ್.ಟಿ.ನಗರ ದೇವೇಗೌಡ ರಸ್ತೆಯಲ್ಲಿ ಸವಾರನ ನಿಯಂತ್ರಣ ಕಳೆದುಕೊಂಡು ಬೈಕ್ ಅಡ್ಡಾದಿಡ್ಡಿ ಚಲಿಸಿ ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಅಫ್ರೋಜ್ ಅಹ್ಮದ್ (32) ಮೃತಪಟ್ಟಿದ್ದಾರೆ. ಸ್ನೇಹಿತ ಮಹೇಶ್ ಎಂಬಾತನಿಗೆ ಗಾಯಗಳಾಗಿವೆ. ಕೆಜಿ ಹಳ್ಳಿ ನಿವಾಸಿ ಅಫ್ರೋಜ್, ಮನೆ ಸಮೀಪದಲ್ಲಿ ಸೋಫಾ ತಯಾರಿಕೆ ಅಂಗಡಿ ಇಟ್ಟುಕೊಂಡಿದ್ದರು. ಕೆಲಸದ ಮೇಲೆ ಸ್ನೇಹಿತ ಮಹೇಶ್‍ನ ಜತೆ ಜೆ.ಸಿ ನಗರಕ್ಕೆ ಹೋಗಿ ರಾತ್ರಿ 12.30ರ ವೇಳೆಗೆ ಆರ್‍ಟಿ ನಗರದ ದೇವೇಗೌಡ ರಸ್ತೆಯಲ್ಲಿ ವಾಪಸ್ಸಾಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್.ಟಿ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com