ಪಾದಚಾರಿಗೆ ಡಿಕ್ಕಿ, ಸೆಕ್ಯುರಿಟಿ ಸಾವು
ಬೆಂಗಳೂರು: ಮತ್ತೊಂದು ಪ್ರಕರಣದಲ್ಲಿ ವೆಸ್ಟ್ ಆಫ್ ಕಾರ್ಡ್ ರಸ್ತೆ ಶಿವನಗರ ಜಂಕ್ಷನ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸೆಕ್ಯುರಿಟಿ ಗಾರ್ಡ್ ಚಂದ್ರಶೇಖರ್(52) ಎಂಬುವರು ಮೃತಪಟ್ಟಿದ್ದಾರೆ.
ರಾಮಚಂದ್ರಪುರ ನಿವಾಸಿಯಾಗಿರುವ ಚಂದ್ರಶೇಖರ್ ಖಾಸಗಿ ಕಂಪನಿಯಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಸಂಬಂಧಿಯನ್ನು ಭೇಟಿ ಮಾಡಿ ಶಿವನಗರ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿದ್ದು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರಶೇಖರ್ನನ್ನು ಗಮನಿಸಿದ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿಕ್ಕಿ ಮಾಡಿದ ವಾಹನ ಪತ್ತೆ ಕಾರ್ಯಮುಂದುವರೆದಿದೆ.
ರತ್ನಂ ಹೊಟೇಲ್ ಲೈಸೆನ್ಸ್ ರದ್ದುಗೊಳಿಸಲು ಪತ್ರ
ವೇಶ್ಯಾವಾಟಿಕೆ ದಂಧೆಗೆ ಅವಕಾಶ ನೀಡುತ್ತಿರುವ ಶೇಷಾದ್ರಿಪುರ ರತ್ನಂ ಹೊಟೇಲ್ ಮೇಲೆ ದಾಳಿ ನಡೆಸಿರುವ ಕೇಂದ್ರ ವಿಭಾಗ ಪೊಲೀಸರು ಹೊಟೇಲ್ನ ಲೈಸನ್ಸ್ ರದ್ದು ಮಾಡುವಂತೆ ಬಿಬಿಎಂಪಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.
ರತ್ನಂ ಹೊಟೇಲ್ ಮೇಲೆ ದಾಳಿ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಕೆಲಸ ಕೊಡಿಸುವುದಾಗಿ ಪಶ್ಚಿಮ ಬಂಗಾಳ ಹಾಗೂ ಪಂಜಾಬ್ನಿಂದ ಕರೆತರಲಾಗಿದ್ದ 8 ಮಹಿಳೆಯರನ್ನು ರಕ್ಷಿಸಲಾಗಿದೆ. ವೇಶ್ಯಾವಾಟಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಹಲವು ಬಾರಿ ಹೊಟೇಲ್ ಮೇಲೆ ದಾಳಿ ನಡೆಸಲಾಗಿದೆ. ಆದರೂ, ಮುಂದುವರೆಸಿರುವ ಹಿನ್ನೆಲೆಯಲ್ಲಿ ಲೈಸನ್ಸ್ ರದ್ದು ಮಾಡಲು ಬಿಬಿಎಂಪಿಗೆ ಪತ್ರಬರೆಯಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.