ಮರ ಬಿದ್ದು ವೃದ್ಧ ಸಾವು, 4 ಕಾರು ಜಖಂ

ಶಿಥಿಲಗೊಂಡಿದ್ದ ಗುಲ್‍ಮೊಹರ್ ಮರ ಬಿದ್ದು ಪೊಲೀಸ್ ಇನ್ಸ್‍ಪೆಕ್ಟರ್ ತಂದೆ ಮೃತಪಟ್ಟಿರುವ ಘಟನೆ ಆಡುಗೋಡಿ ಪೊಲೀಸ್ ವಸತಿಗೃಹದಲ್ಲಿ...
ಆಡುಗೋಡಿಯಲ್ಲಿ ಮರ ನೆಲಕ್ಕುರುಳಿರುವುದು (ಕೃಪೆ : ಕೆಪಿಎನ್)
ಆಡುಗೋಡಿಯಲ್ಲಿ ಮರ ನೆಲಕ್ಕುರುಳಿರುವುದು (ಕೃಪೆ : ಕೆಪಿಎನ್)

ಬೆಂಗಳೂರು: ಶಿಥಿಲಗೊಂಡಿದ್ದ ಗುಲ್‍ಮೊಹರ್ ಮರ ಬಿದ್ದು ಪೊಲೀಸ್ ಇನ್ಸ್ ಪೆಕ್ಟರ್ ತಂದೆ ಮೃತಪಟ್ಟಿರುವ ಘಟನೆ ಆಡುಗೋಡಿ ಪೊಲೀಸ್ ವಸತಿಗೃಹದಲ್ಲಿ ಬುಧವಾರ ಸಂಜೆ ನಡೆದಿದೆ. ಘಟನೆಯಲ್ಲಿ 2 ಕಾರುಗಳು ಹಾಗೂ 2 ಬೈಕ್‍ಗಳು ಜಖಂಗೊಂಡಿವೆ. ತುಮಕೂರು ಜಿಲ್ಲೆ ಶಿವಗಂಗೆ ಮೂಲದ ಎಂ.ಎನ್. ಪುಟ್ಟಗಂಗಪ್ಪ (76) ಮೃತರು. ಇವರು ತಮ್ಮ ಪತ್ನಿ ಹಾಗೂ ರಾಜ್ಯ ಗುಪ್ತದಳದಲ್ಲಿ ಇನ್ಸ್‍ಪೆಕ್ಟರ್ ಆಗಿರುವ ಪುತ್ರ ಧರಣೇಶ್ ಜತೆ ವಸತಿಗೃಹದಲ್ಲಿ ವಾಸವಿದ್ದರು. ಬುಧವಾರ ಸಂಜೆ 5.15ರ ಸುಮಾರಿಗೆ ಸಮೀಪದ ಅಂಗಡಿಗೆ ತೆರಳುತ್ತಿದ್ದಾಗ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ ಆಡುಗೋಡಿ
ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯಂತ್ರಗಳ ಮೂಲಕ ಮರ ಕತ್ತರಿಸಿ ಶವವನ್ನು ಹೊರ ತೆಗೆದರು. 100 ಎಕರೆ ಪ್ರದೇಶದಲ್ಲಿ 1200 ವಸತಿಗೃಹಗಳಿವೆ. ಆವರಣದಲ್ಲಿ ಸಾವಿರಾರು ಮರಗಳಿವೆ. ಈ ಪೈಕಿ ಕೆಲ ಮರಗಳು ಶಿಥಿಲಗೊಂಡಿದ್ದು ಜೋರಾಗಿ ಗಾಳಿ ಬೀಸಿದರೆ ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ ಎಂಬುವರಿಗೆ 10 ದಿನಗಳ ಹಿಂದೆ ಮರ ಕತ್ತರಿಸುವಂತೆ ಮನವಿ ಮಾಡಲಾಗಿತ್ತು. ಜೂನ್ 6ರಿಂದ ಮರಗಳ ತೆರವು ಕಾರ್ಯ ಆರಂಭಿಸಬೇಕಿತ್ತು. ಆದರೆ, ಕಾರ್ಮಿಕರು ಬೇರೆಡೆ ತೆರಳಿದ್ದ ಕಾರಣ ಕೆಲಸ ಆರಂಭಿಸಲಾಗಿರಲಿಲ್ಲ ಎಂದು ನಗರ ಸಶಸ್ತ್ರ  ಮೀಸಲು ಪಡೆ ದಕ್ಷಿಣ ವಿಭಾಗ ಡಿಸಿಪಿ ಕಾಂತರಾಜು ಮಾಧ್ಯಮಗಳಿಗೆ ತಿಳಿಸಿದರು. ಮೇ 29ರಂದು ಸಂಜೆ ಗಾಳಿಸಹಿತ ಸುರಿದ ಭಾರಿ ಮಳೆಗೆ ಆನೆಪಾಳ್ಯ ಬಸ್ ನಿಲ್ದಾಣದಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟು ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿದ್ದವು. 10 ದಿನಗಳಲ್ಲಿ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com