ನಾಳೆ ಬೆಂಗಳೂರಿನಲ್ಲಿ ಉದ್ಯೋಗ ಮತ್ತು ಉಚಿತ ಕೌಶಲ್ಯ ತರಬೇತಿ ಮೇಳ

ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮಾಜಿ ಸಚಿವ ಡಿವಿ ಸದಾನಂದ ಗೌಡ
ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಮಾಜಿ ಸಚಿವ ಡಿವಿ ಸದಾನಂದ ಗೌಡ
Updated on

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅಡಿ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಮತ್ತು ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ನಾಳೆ ಬೆಂಗಳೂರಿನಲ್ಲಿರುವ ಮಹಾಲಕ್ಷ್ಮೀ ಲೇಔಟ್ ನಲ್ಲಿ ಉದ್ಯೋಗ ಮತ್ತು ಉಚಿತ ಕೌಶಲ್ಯ ತರಬೇತಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಎಫ್ ಕೆಸಿಸಿ ಮತ್ತು ಕಾಸಿಯಾ ಸಹಭಾಗಿತ್ವದಲ್ಲಿ ಈ ಮೇಳ ನಡೆಯುತ್ತಿದ್ದು, ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಸುಮಾರು 4,500 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುವುದಲ್ಲದೇ, ಸಂದರ್ಶನದಲ್ಲಿ ತಿರಸ್ಕೃತಗೊಂಡ ಅಭ್ಯರ್ಥಿಗೆ ಕೌಶಲ್ಯ ತರಬೇತಿ ನೀಡಿ, 8 ಸಾವಿರ ಸ್ಟೈಫಂಡ್ ನೀಡಲಾಗುತ್ತದೆ. ಹಾಗೇ, ತರಬೇತಿ ನೀಡಿದ ನಂತರ ಅವರಿಗೆ ಉದ್ಯೋಗ ಒದಗಿಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಿರುದ್ಯೋಗವನ್ನು ಅಳಿಸಿ, ದೇಶದ ಯುವಜನತೆಗೆ ಕೌಶಲ್ಯದ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಬಾರಿಯ ಬಜೆಟ್ ನಲ್ಲಿ ಈ ಯೋಜನೆಯಲ್ಲಿ 1500 ಕೋಟಿ ಮೀಸಲಿರಿಸಲಾಗಿದೆ. 5 ವರ್ಷದೊಳಗಾಗಿ ಸುಮಾರು 3 ಕೋಟಿ ಯುವಜನತೆಗೆ ಉದ್ಯೋಗ ಮತ್ತು ಕೌಶಲ್ಯ ತರಬೇತಿ ನೀಡಬೇಕು ಎಂಬ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು.

ನಾಳೆ ನಡೆಯಲಿರುವ ಈ ಮೇಳದಲ್ಲಿ ಸುಮಾರು 60 ರಿಂದ 70 ಕಂಪನಿಗಳು ಭಾಗವಹಿಸಲಿವೆ. ಈ ಮೇಳದಲ್ಲಿ ಭಾಗವಹಿಸಲು ಯುವಜನತೆ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿ ತಿಂಗಳು 8 ವಿಧಾನಸಭಾ ಕ್ಷೇತ್ರದಲ್ಲಿ ಈ ಮೇಳ ನಡೆಯಲಿದ್ದು, ಯುವಜನತೆ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರಿಗೆ ಈ ಸೌಲಭ್ಯ ದೊರೆಯಲಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪೀಣ್ಯ ದಾಸರಹಳ್ಳಿ ಮತ್ತು ಮಲ್ಲೇಶ್ವರಂನಲ್ಲೂ ನಡೆಯಲಿದೆ ಎಂದಿದ್ದಾರೆ.

100 ಕೋಟಿ ವೆಚ್ಚದಲ್ಲಿ ಸ್ಕಿಲ್ ಡೆವೆಲಪ್ ಮೆಂಟ್ ಟ್ರೈನಿಂಗ್ ಸೆಂಟರ್
ಪೀಣ್ಯ ದಾಸರಹಳ್ಳಿಯಲ್ಲಿ 100 ಕೋಟಿ ವೆಚ್ಚದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ನಿರ್ಮಾಣಮಾಡಲಾಗುತ್ತಿದೆ. ಈ ಮೂಲಕ ನಗರದಲ್ಲಿರುವ ನಿರುದ್ಯೋಗಿಗಳು ಅಂದರೆ, ಶಾಲೆಯನ್ನು ಅರ್ಧಕ್ಕೆ ಬಿಟ್ಟಂತಹ ನಿರುದ್ಯೋಗಿಗಳಿಗೆ ಆಸಕ್ತಿ ವಿಷಯಗಳಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com