ಪತ್ನಿಯನ್ನೇ ಕೊಂದು ವೃದ್ಧ ಆತ್ಮಹತ್ಯೆ ಯತ್ನ
ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವೃದ್ಧ ಪತಿಯೇ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಗಂಗಮ್ಮನಗುಡಿ ಸಮೀಪದ ಕುವೆಂಪುನಗರದಲ್ಲಿ ನಡೆದಿದೆ.
ಪತ್ನಿ ಕಲಾವತಿ(70)ಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಸುಬ್ರಹ್ಮಣ್ಯ (80) ಹೊಟ್ಟೆಗೆ ಅದೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರ ಸ್ಥಿತಿಯೂ ಗಂಭೀರವಾಗಿದ್ದು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಕಲಾವತಿ, ಆರೋಪಿ ಸುಬ್ರಹ್ಮಣ್ಯ ಅವರಿಗೆ ಎರಡನೇ ಪತ್ನಿಯಾಗಿದ್ದರು. ಕಳೆದ 6 ತಿಂಗಳಿಂದ ಸುಬ್ರಹ್ಮಣ್ಯ ನಾಪತ್ತೆಯಾಗಿದ್ದರು. ಕುವೆಂಪುನಗರದಲ್ಲಿ ಮಗಳ ಮನೆಯಲ್ಲಿ ವಾಸವಿದ್ದ ಕಲಾವತಿ, ಮನೆಕೆಲಸ ಮಾಡುತ್ತಿದ್ದರು.
ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಕೆಲಸ ಮುಗಿಸಿ ತೆರಳುತ್ತಿದ್ದಾಗ ಸುಬ್ರಹ್ಮಣ್ಯ ರಸ್ತೆಮಧ್ಯದಲ್ಲೇ ಪತ್ನಿಯನ್ನು ಅಡ್ಡಗಟ್ಟಿ ಚಾಕು ವಿನಿಂದ ಇರಿದು ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದರು. ಚೀರಾಟ ಕೇಳಿ ನೆರವಿಗೆ ಧಾವಿಸಿದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಕಲಾವತಿ ಮಾರ್ಗಮಧ್ಯೆ ಕೊನೆಯು ಸಿರೆಳೆದಿದ್ದಾಳೆ.
ಸುಬ್ರಹ್ಮಣ್ಯ ಮದ್ಯವ್ಯಸನಿಯಾಗಿದ್ದು, ಆಗಾಗ ಹಣ ನೀಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಹಣ ಕೊಡದಿದ್ದರಿಂದ ಕುಪಿತಗೊಂಡು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಕಳೆದ 6 ತಿಂಗಳಿಂದ ಸುಬ್ರಹ್ಮಣ್ಯ ಎಲ್ಲಿ ವಾಸವಿದ್ದರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಂಗಮ್ಮನಗುಡಿ ಠಾಣೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.