ವಿಧಾನಪರಿಷತ್ತು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳ ಸಂಚಾರ ನಿಷೇಧ ಮಾಡಬೇಕು!
-ಇಂಥದೊಂದು ಸಲಹೆಯನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ನೀಡಿದೆ. ಆದರೆ ಇದಕ್ಕೆ ಸರ್ಕಾರ ಸರ್ಕಾರ ಅಂತಿಮ ಅನುಮೋದನೆ ನೀಡಿಲ್ಲ. ಒಂದು ವೇಳೆ ಸರ್ಕಾರ ಇದಕ್ಕೆ ಸಮ್ಮತಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಆಟೋಗಳ ಆಟ ಇನ್ನು ನಡೆಯೋದಿಲ್ಲ.
ರಾಜ್ಯ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಹೊರಬಿದ್ದಿತ್ತು.
ಅದರಲ್ಲಿ ಆಟೋಗಳ ನಿಷೇಧ ಕುರಿತ ಉಲ್ಲೇಖವಿತ್ತು. ಇದನ್ನಾಧರಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳ ಸಂಚಾರ ನಿಯಂತ್ರಿಸುವ ಬಗ್ಗೆ ಸಾರಿಗೆ ಇಲಾಖೆಗೆ ಸೂಚಿಸಿದ್ದರು. ಇದಕ್ಕೆ ಉತ್ತರವಾಗಿ ಸಾರಿಗೆ ಇಲಾಖೆ ಈಗ ನಗರದಲ್ಲಿ ಆಟೋ ರಿಕ್ಷಾಗಳ ಸಂಚಾರ ನಿಷೇಧಿಸುವ ಶಿಫಾರಸು ಮಾಡಿದೆ. ಇದು ಸದ್ಯ ಸರ್ಕಾರದ ಪರಿಶೀಲನೆಯಲ್ಲಿದ್ದು, ಈ ಪ್ರಶ್ನೆ ಈಗ ವಿಧಾನಪರಿಷತ್ತಿನಲ್ಲಿದೆ.
ಪರಿಷತ್ತಿನಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನ ಇ.ಕೃಷ್ಣಪ್ಪ, ನಗರದಲ್ಲಿ ಆಟೋಗಳ ಸಂಚಾರದ ಬಗ್ಗೆ ಪ್ರಶ್ನೆ ಕೇಳುವವರಿದ್ದರು. ಆದರೆ ಇದಕ್ಕೆ ಸಂಬಂಧಿಸಿದ ಪ್ರಶ್ನೋತ್ತರದ ಪ್ರತಿಯನ್ನು ಸದನದಲ್ಲಿ ಎಲ್ಲಾ ಸದಸ್ಯರಿಗೆ ಹಂಚಿಕೆಯನ್ನೂ ಮಾಡಲಾಗಿತ್ತು. ಆದರೆ ಈ ಬಗ್ಗೆ ಚರ್ಚಿಸಲು ಪ್ರಶ್ನೆ ಹಾಕಿದ್ದ ಸದಸ್ಯ ಕೃಷ್ಣಪ್ಪ ಅವರೇ ಗೈರು ಹಾಜರಾಗಿದ್ದರು. ಹೀಗಾಗಿ ಆಟೋ ರಿಕ್ಷಾ ನಿಯಂತ್ರಿಸುವ ಬಗೆಗಿನ ಚರ್ಚೆ ಮುಂದಕ್ಕೆ ಹೋಯಿತು.
Advertisement