ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ನವ ವಿವಾಹಿತೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಕಮಲಾ ನಗರ ಬಳಿಯ ಕಸ್ತೂರಿ ನಗರದಲ್ಲಿ ಶುಕ್ರವಾರ ನಡೆದಿದೆ.
ಕಾರ್ತಿಕ್ ಎಂಬುವರ ಪತ್ನಿ ಪವಿತ್ರಾ (22) ಮೃತರು. ಶುಕ್ರವಾರ ಮಧ್ಯಾಹ್ನ ಪತಿ ಕೆಲಸದ ಮೇಲೆ ಹೊರ ಹೋಗಿದ್ದಾಗ ಅವರು ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ.ಆರ್ ಪುರ ಮೂಲದ ಪವಿತ್ರಾ, ಖಾಸಗಿ ಕಂಪನಿ ಉದ್ಯೋಗಿ ಕಾರ್ತಿಕ್ ಅವರನ್ನು 6 ತಿಂಗಳ ಹಿಂದೆ ವಿವಾಹವಾಗಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. ಗುರುವಾರ ಪತಿ ಕೆಲಸದ ಮೇಲೆ ಮನೆಯಿಂದ ತೆರಳಿದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊರಗೆ ಹೋಗಿದ್ದ ಪತಿ ಮನೆಗೆ ಬಂದಾಗ ಪತ್ನಿಯನ್ನು ನೇಣಿನ ಕುಣಿಕೆಯಿಂದ ಇಳಿಸಿ ಆಸ್ಪತ್ರೆಗೆ ಕರೆ ದೊಯ್ದಿದ್ದಾನೆ. ಅಷ್ಟರಲ್ಲಾಗಲೇ ಪವಿತ್ರಾ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.
ವರದಕ್ಷಿಣೆಗಾಗಿ ತಮ್ಮ ಮಗಳಿಗೆ ಅಳಿಯ ಕಾರ್ತಿಕ್ ಹಾಗೂ ಆತನ ಕುಟುಂಬದವರು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಪವಿತ್ರಾ ಪೋಷಕರು ಆರೋಪಿಸಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಪೊಲೀಸರು ತಿಳಿಸಿದ್ದಾರೆ.
Advertisement