ಬೆಂಗಳೂರು: ಕೆ.ಆರ್.ಪುರ ಬೆಳ್ಳಂದೂರು ಕೆರೆಯಲ್ಲಿ ಸೇರುತ್ತಿರುವ ರಾಸಾಯನಿಕಗಳ ಪರಿಣಾಮ ಯಮಲೂರು ಕೋಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರನ್ನು ಆತಂಕಕ್ಕೀಡುಮeಡಿದೆ.
ಯಮಲೂರು ಕೆರೆ ಕೋಡಿ ಬಳಿಯ ರಾಜಕಾಲುವೆಯಲ್ಲಿ ನೊರೆ ಹೆಚ್ಚಾಗಿದ್ದು, ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿಯೂ ಕಾಣಿಸಿಕೊಂಡಿದೆ. ನೀರಿಲ್ಲದ ಜಾಗದಲ್ಲಿ ನೊರೆ ಶೇಖರಣೆಯಾಗಿದ್ದು, ರಾಸಾಯನಿಕದ ಪ್ರಮಾಣ ಹೆಚ್ಚಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಬೆಳಗ್ಗೆಯಾಗುತ್ತಿದ್ದಂತೆ ಬೆಂಕಿ ಆರಿತ್ತು. ಸ್ಥಳಕ್ಕೆ ಬಿಬಿಎಂಪಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಭಾಗದಲ್ಲಿ ಕಾರ್ಖಾನೆ ಹಾಗೂ ಬಹುಮಹಡಿ ಕಟ್ಟಡಗಳು ನಿರ್ಮಾಣವಾಗುವ ಮೊದಲು ಕೆರೆಯ ನೀರು ಶುದ್ಧವಾಗಿತ್ತು. ರೈತರು ವ್ಯವಸಾಯಕ್ಕೆ ಬಳಸುತ್ತಿದ್ದರು. ಇತ್ತೀಚೆಗೆ ಬಹುಮಹಡಿ ಕಟ್ಟಡ ಹಾಗೂ ಕಾರ್ಖಾನೆಗಳಿಂದ ವಿಷಯುಕ್ತ ರಾಸಾಯನಿಕ ನೀರು ಸೇರ್ಪಡೆಯಾಗಿ ಕೆರೆ ಕಲುಷಿತಗೊಂಡಿದೆ. ಯಮಲೂರು, ಮಾರತ್ತಹಳ್ಳಿ ಮೂಲಕ ವರ್ತೂರು ಕೆರೆಗೆ ಹಾದು ಹೋಗುವ ರಾಜ ಕಾಲುವೆಯನ್ನು ಬಲಾಢ್ಯರು ಒತ್ತುವರಿ ಮಾಡಿರುವುದರಿಂದ ಸಮಸ್ಯೆ ಹೆಚ್ಚಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ವರ್ತೂರು ಹಾಗೂ ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕ ಹೆಚ್ಚಾಗಿ, ನೊರೆ ರಸ್ತೆಮಟ್ಟದವರೆಗೆ ಹರಿದಿತ್ತು. ಈ ಭಾಗದಲ್ಲಿ ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಆರಂಭಿಸಿದ ನಂತರ ಸಮಸ್ಯೆ ಕಡಿಮೆಯಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಆದರೆ ಮತ್ತೊಂದು ಭಾಗವಾದ ಯಮಲೂರು ಕೋಡಿಯಲ್ಲಿ ನೊರೆ ಹೆಚ್ಚುವುದರೊಂದಿಗೆ ಬೆಂಕಿ ಸೃಷ್ಟಿಯಾಗಿ ಆತಂಕ ನಿರ್ಮಾಣವಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ವಿ.ಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Advertisement