ಬೆಂಗಳೂರು: ಕೆಐಎಎಲ್ ರಸ್ತೆ ಚಿಕ್ಕಜಾಲದ ಮೀನುಕುಂಟೆ ಹೊಸೂರು ಗೇಟ್ ಬಳಿ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಮು (26) ಮೃತರು. ಘಟನೆಯಲ್ಲಿ ಗಾಯಗೊಂಡಿರುವ ಮೃತನ ಸ್ನೇಹಿತ ಅಜಯ್ ಎಬುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ತನ್ನ ಗೆಳೆಯನ ಜತೆ ರಾಮು ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ಚಾಲಕ ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಕನಕಪುರ ಮೂಲದ ರಾಮು ಮೀನುಕುಂಟೆ ಹೊಸೂರು ಹತ್ತಿರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ 7.15ರಲ್ಲಿ ಕೆಲಸ ಮುಗಿಸಿ ಸ್ನೇಹಿತ ಅಜಯ್ ಜತೆ ಮನೆಗೆ ಮರಳುತ್ತಿದ್ದರು. ಈ ವೇಳೆ ಮೀನಕುಂಟೆ ಹೊಸೂರು ಗೇಟ್ ಬಳಿ ಅಜಯ್ ಬೈಕ್ ಅನ್ನು ಯು ಟ್ರನ್ ತೆಗೆದುಕೊಳ್ಳುವಾಗ ನಗರದ ಕಡೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ತೀರ್ವತೆಗೆ ಬೈಕನ್ನು ಕಾರು, ಸುಮಾರು 20 ಅಡಿ ದೂರ ಎಳೆದೊಯ್ದಿದೆ.
ಗಾಯಾಳುಗಳನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ರಾಮು ಕೊನೆಯುಸಿರೆಳೆದಿದ್ದು, ಅಜಯ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement