ಕೆಆರ್ಪುರ: ಸ್ವಾತಂತ್ರ್ಯ ಬಂದು 6 ದಶಕ ಕಳೆದ ಬಳಿಕ ಮೊದಲ ಬಾರಿಗೆ ರಾಂಪುರ ಗ್ರಾಮದಲ್ಲಿ ಚುನಾವಣೆ ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆ, ಪೂರ್ವ ತಾಲೂಕಿನ ರಾಂಪುರ ಗ್ರಾಮದಲ್ಲಿ ಈವರೆಗೂ ಚುನಾವಣೆ ನಡೆದಿರಲಿಲ್ಲ.
ಈಗ ಗ್ರಾಮದ 3 ವಾರ್ಡ್ಗಳಲ್ಲಿ 7 ಸದಸ್ಯ ಸ್ಥಾನಕ್ಕೆ ಸ್ಪರ್ಧೆ ನಡೆಯುತ್ತಿದ್ದು, 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದುವರೆಗೆ ಗ್ರಾಮಸ್ಥರ ಒಗ್ಗಟ್ಟಿನಿಂದ ಅವಿರೋಧವಾಗಿ ಸದಸ್ಯರು ಆಯ್ಕೆಯಾಗುತ್ತಿದ್ದರು. ಯುವ ರಾಜಕೀಯ ನಾಯಕರ ರಾಜಕೀಯ ಉತ್ಸಾಹ ಹಾಗೂ ಹಿರಿಯ ರಾಜಕೀಯ ಮುಖಂಡರ ಬೇಸರದ ನಡುವೆ ಮೊದಲ ಬಾರಿ ರಾಂಪುರದಲ್ಲಿ ಚುನಾವಣೆ ನಡೆಯಲಿದೆ.
ಪ್ರತಿ ವರ್ಷ ರಾಂಪುರದಲ್ಲಿ ಮುಖಂಡರೆಲ್ಲಾ ಸೇರಿ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದರು.ಪಂಚಾಯಿತಿ ಹೊರತುಪಡಿಸಿದರೆ ಉಳಿದೆಲ್ಲಾ ಚುನಾವಣೆಗಳಲ್ಲಿ ಪರ-ವಿರುದಟಛಿದ ವಾತಾವರಣ ಗ್ರಾಮದಲ್ಲಿರುತ್ತಿತ್ತು. ಈ ಬಾರಿ ಪಂಚಾಯಿತಿ ಸದಸ್ಯತ್ವ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನವಾಗದಿರುವುದರಿಂದ ಇಲ್ಲಿ ಚುನಾವಣೆಗೆ ತಯಾರಿ ನಡೆದಿದೆ.
`ಗ್ರಾಮದ ಕೆಲವು ಹಿರಿಯರು ಗ್ರಾಮದ ಗೌಪ್ಯತೆ ಕಾಪಾಡಿಕೊಂಡು ಬರುತ್ತಿದ್ದರು. ನಾವು ಹುಟ್ಟಿದಾಗಿನಿಂದ ಪಂಚಾಯತಿ ಚುನಾವಣೆ ನಡೆದಿದ್ದು ನೋಡಿಲ್ಲ. ಕೆಲವು ಪ್ರಮುಖ ಹಿರಿಯ ಮುಖಂಡರು ಮೃತರಾದ ಬಳಿಕ ಯುವಕರಲ್ಲಿ ಒಡಕು ಕಾಣಿಸಿಕೊಂಡಿದೆ. ಹೀಗಾಗಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಈ ಬೆಳವಣಿಗೆ ಬೇಸರ ತಂದಿದೆ' ಎಂದು ಸ್ಥಳೀಯ ಕಾಂತಕುಮಾರ್ ವಿಷಾದ ವ್ಯಕ್ತಪಡಿಸಿದರು. `ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ಗ್ರಾಮಸ್ಥರೆಲ್ಲಾ ಸೇರಿ ಅಂತಿಮ ಆಯ್ಕೆ ಮಾಡುತ್ತಿದ್ದರು. ಈಗ ಯುವಕರಲ್ಲಿ ರಾಜಕೀಯದ ಆಸೆ ಹೆಚ್ಚಾಗಿರುವುದು ಚುನಾವಣೆಗೆ ಕಾರಣವಾಗಿದೆ. ಇದರಿಂದ ಗ್ರಾಮದ ಒಗ್ಗಟ್ಟಿಗೆ ಧಕ್ಕೆಯಾಗಿದೆ' ಎಂದು ಮಾಜಿ ಗ್ರಾ.ಪಂ.ಅಧ್ಯಕ್ಷ ಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
Advertisement