ಬೆಂಗಳೂರು: ಎಚ್ಐವಿ ಪೀಡಿತ ಚಿಕ್ಕ ವಯಸ್ಸಿನ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಬೆಂಗಳೂರು ಎಚ್ಐವಿ ಮತ್ತು ಏಡ್ಸ್ ಫೋರಂ ಕಳವಳ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಮುಖ್ಯಸ್ಥೆ ರಾಧಾ, ಆದಿನಾರಾಯಣ ಸೋಮಶೇಖರ್, ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ಎಆರ್ಟಿ ಕೇಂದ್ರಗಳಲ್ಲಿ ಸ್ನೇಹ ಮಯವಾಗಿ ವರ್ತಿಸಬೇಕು. ಆಪ್ತಸಮಾಲೋಚಕರನ್ನು ನೇಮಿಸಬೇಕು. ಚಿಕಿತ್ಸೆಗೆ ಸ್ಪಂದಿಸದ ಮಕ್ಕಳ ಬಗ್ಗೆ ಸೌಜನ್ಯಯುತವಾಗಿ ನಿಗಾವಹಿಸಬೇಕು. ಲೈಂಗಿಕ ಅಲ್ಪಸಂಖ್ಯಾತರ ತಾರತಮ್ಯ ಸರಿಪಡಿಸಬೇಕು. ಎಚ್ಐವಿ ಪೀಡಿತರಿಗೆ ಒಂದು ಸಾವಿರ ಮಾಸಾಶನ ನೀಡಬೇಕು. ಚಿಕಿತ್ಸೆಗೆ ತೆರಳುವವರಿಗೆ ಪ್ರಯಾಣಭತ್ಯೆ ನೀಡಬೇಕು. ಆರೈಕೆ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಮಶೇಖರ್ (19) ಮಾತನಾಡಿ, ನನಗೆ ಅಪ್ಪ-ಅಮ್ಮನಿಂದ ಈ ರೋಗ ಬಂದಿದೆ. 2008ರಿಂದ ಎಚ್ಐವಿ ಪೀಡಿತನಾಗಿದ್ದು, ಈವರೆಗೂ ನಾನಾ ಕಷ್ಟಗಳನ್ನು ಎದುರಿಸಿದ್ದೇನೆ. ಚಿಕಿತ್ಸೆ ನೀಡುವ ಸ್ಥಳದಲ್ಲೂ ಕಿರುಕುಳವಾಗುತ್ತಿದೆ. ಸರ್ಕಾರದ ಔಷಧ ಸರಿಯಿಲ್ಲ. ಖಾಸಗಿ ಔಷಧಿ ಖರೀದಿಸಿ ಎಂದು ಎಆರ್ಟಿ ಕೇಂದ್ರದ ವೈದ್ಯರೇ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದರು.
Advertisement