ಬೆಂಗಳೂರು: ರಾಘವೇಶ್ವರ ಸ್ವಾಮೀಜಿ ಅತ್ಯಾಚಾರ ಪ್ರಕರಣ ಸಂಬಂಧ ಒಟ್ಟು 5 ಪ್ರಕರಣಗಳ ಪೈಕಿ ಎರಡು ಬೆದರಿಕೆ ಕರೆ ದೂರನ್ನು ಬಿ ರಿಪೊರ್ಟ್(ಪತ್ತೆಯಾಗದ ಪ್ರಕರಣ) ಎಂದು ಸರ್ಕಾರ ನೋಟೀಸ್ ನೀಡಿದೆ ಎಂದು ಮಠದ ಕಾರ್ಯದರ್ಶಿ ಮೋಹನ ಭಾಸ್ಕರ್ ಹೆಗಡೆ ಆರೋಪಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ ಹಾಗೂ ರಾಮಕಥಾ ಗಾಯಕಿ ದೀಪಿಕಾ ಅವರಿಗೆ ಬಂದ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ನಂತರ ಆ ಕರೆಗಳಲ್ಲಿ ಹೇಳಿದ ಪ್ರಕಾರ ಎಲ್ಲಾ ಪ್ರಕರಣಗಳು ನಡೆದಿವೆ. ರಾಮಕಥಾ ಸಯೋಜಕ ಗಜಾನನ ಶರ್ಮಾ ಹಾಗೂ ಗಾಯಕಿ ಶಂಕರಿ ಮೂರ್ತಿ ಬಾಳಿಲ ಇವರಿಗೂ ಬೆದರಿಕೆ ಕರೆ ಬಂದಿದ್ದು ಆ ಕುರಿತು ನೀಡಿದ ದೂರಿನ ಬಗ್ಗೆ ಎಫ್ ಐಆರ್ ಕೂಡ ದಾಖಲಾಗಿಲ್ಲ ಎಂದು ಆರೋಪಿಸಿದರು.
ಭಕ್ತರು ದೂರು, ಪುರಾವೆಗಳನ್ನು ನೀಡಿದರೂ ಲೆಕ್ಕಿಸದೆ ಮಠದ ವಿರೋಧಿಗಳನ್ನು ಉಳಿಸುವ ಷಡ್ಯಂತ್ರ ನಡೆಯುತ್ತಿದೆ. ಇದು ಸಾಮಾಜದ ಮೇಲೆ ಆಘಾತವ ನ್ನುಂಟುಮಾಡುತ್ತಿದೆ. ಮಠಕ್ಕೆ ರಕ್ಷಣೆ ಕೊಡುವ ಬದಲು ಬೇಲಿಯೇ ಎದ್ದು ಹೊಲ ಮೇಯ್ದಂತೆ ಸರ್ಕಾರವೇ ಆರೋಪಿಗಳಿಗೆ ನೆರವು ನೀಡುತ್ತಿದೆ ಎಂದು ದೂರಿದರು. ಪ್ರಕರಣವನ್ನು ವಾಪಾಸ್ ಪಡೆಯುವುದಕ್ಕೆ ರಚಿಸಿರುವ ಸಂಪುಟ ಉಪ ಸಮಿತಿಯ ಬಹುಮತದ ಆದೇಶದ ಮೇರೆಗೆ ಸರ್ಕಾರ ಈ ನಿರ್ಣಯ ತೆಗೆದುಕೊಂಡಿಲ್ಲ. ಇದರಲ್ಲಿ ಸಾಮಾಜಿಕ ನ್ಯಾಯ, ಸಾಮಾಜಿಕ ಕ್ಷೇಮ, ಸಾಮಾಜಿಕ ಹಿತದೃಷ್ಟಿ ಕಾಣುತ್ತಿಲ್ಲ, ಆರೋಪಿಗಳಿಗೆ ಸಹಾಯ ಮಾಡಿ, ನ್ಯಾಯಾಲಯದ ಕಾರ್ಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ದೂರಿದರು.
ನಿವೃತ್ತ ನ್ಯಾಯಾಧೀಶ ರಾಮಕೃಷ್ಣಭಟ್ ಕುಕ್ಕಜೆ ಮಾತನಾಡಿ, ನಕಲಿ ಸಿಡಿ ಪ್ರಕರಣವನ್ನು ಸರ್ಕಾರ ಕ್ಯಾಬಿನೆಟ್ ಉಪಸಮಿತಿ ಹಿಂಪಡೆದ ಕ್ರಮ ವ್ಯಾಪಕ ಚರ್ಚೆ ಆಗುತ್ತಿರುವ ಸಮಯದಲ್ಲಿ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಸರಣಿ ಅನ್ಯಾಯ ನಡೆಯುತ್ತಿರುವಂತೆ ಕಾಣುತ್ತಿದೆ. ಮಠದ ಭಕ್ತರು ದೂರಿರುವ ಪ್ರಕರಣಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
Advertisement