ಬೆಂಗಳೂರು: ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳದ ಮಧ್ಯೆ `ಪರಿವಾರ'ದ ಕೊಂಡಿಯಂತಿರುವ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಕಳೆದ ಎರಡು ದಿನಗಳಿಂದ ಗೌಡರ ಕುಟುಂಬದ ಜತೆ ಚರ್ಚೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಿಬಿಎಂಪಿ ಮೈತ್ರಿ ವಿಚಾರ ಈಗ ಮುಗಿದು ಹೋದ ಅಧ್ಯಾಯ ಎಂದು ಸ್ವಯಂ ಘೋಷಿಸಿರುವ ಇಬ್ರಾಹಿಂ ಮಂಗಳವಾರ ರಾತ್ರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌರ ಜತೆ ಎರಡು ಗಂಟೆ ರಹಸ್ಯ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬುಧವಾರ ಬೆಳಗ್ಗೆ ಬೆನ್ಸನ್ ಟೌನ್ ನಲ್ಲಿರುವ ಇಬ್ರಾಹಿಂ ನಿವಾಸಕ್ಕೆ ತೆರಳಿ ಬಿಬಿಎಂಪಿ ಮೈತ್ರಿ ಗೆ ಸಂಬಂಧ ಪಡದೇ ಇರುವ ಸಂಗತಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಣದ ಜತೆಗೆ ಸದ್ಯಕ್ಕೆ ಅಷ್ಟಕಷ್ಟೇ ಎಂಬ ಸಂಬಂಧ ಹೊಂದಿರುವ ಇಬ್ರಾಹಿಂ, ದೇವೇಗೌಡರ ಜತೆಗೆ ಇತ್ತೀಚೆಗೆ ಸಾಧಿಸಿರುವ ಹೊಸ `ಸಂಪರ್ಕ'ದ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.
ಪ್ರಸ್ತುತ ಲಭ್ಯವಾಗಿರುವ ಖಚಿತ ಮಾಹಿತಿ ಪ್ರಕಾರ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಈ `ಅರೆ ಬಹಿರಂಗ' ಚರ್ಚೆಗೆ ತನ್ನದೇ ಆದ ರಾಜಕೀಯ ಉದ್ದೇಶಗಳಿವೆ. ಮುಂದಿನ ಒಂದು ವರ್ಷದಲ್ಲಿ ರಾಜ್ಯ ರಾಜಕಾರಣ ದಲ್ಲಿ ಹಲವು ಬದಲಾವಣೆಗಳಾಗಬಹುದೆಂಬ ಸೂಚನೆ ಹಿನ್ನೆಲೆಯಲ್ಲಿ ಜನತಾ ಪರಿವಾರದ ಹಳೆ ಸದಸ್ಯರನ್ನು ಮತ್ತೆ ಒಂದು ಮಾಡುವ ಪ್ರಯತ್ನವೂ ಇದರಲ್ಲಿ ಅಡಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಯಾವ ಸ್ವರೂಪದಲ್ಲಿ ಮುಂದುವರಿಸಬಹುದೆಂಬ ಬಗ್ಗೆಯೂ ಚರ್ಚೆ ನಡೆದಿದೆ.
ಮುಂಬರುವ ಜಿಲ್ಲಾ ಪಂಚಾ ಯತ್, ತಾಲೂಕು ಪಂಚಾಯತ್ ಹಾಗೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಈ ಮೈತ್ರಿ ಗಟ್ಟಿಗೊಳಿಸುವುದಕ್ಕೆ ಸಾಧ್ಯವೇ ? ಎಂಬ ಅಭಿಪ್ರಾಯವ ನ್ನು ಇಬ್ರಾಹಿಂ ಮೂಲಕ ಹೈಕಮಾಂಡ್ ಕಿವಿಗೆ ತಲುಪಿಸಲು ಕುಮಾರಸ್ವಾಮಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯನವರ ಭವಿಷ್ಯದ ನಡೆ ಆಧರಿಸಿ ಜೆಡಿಎಸ್ ಜತೆ ಯಾವ ರೀತಿ ಸಖ್ಯ ಮುಂದುವರಿಸಬೇಕೆಂಬ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆದಿದೆ. ಒಂದೊಮ್ಮೆ ಸಿದ್ದರಾಮಯ್ಯ ಚುನಾವಣಾ ರಾಜಕಾರಣದಿಂದ ದೂರ ಸರಿದರೆ ಆಗ ಜನತಾ ಪರಿವಾರದಿಂದ ಬಂದವರು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾತುಕತೆ ನಡೆದಿದೆ ಎಂದು ಗೊತ್ತಾಗಿದೆ.
ಇಬ್ರಾಹಿಂ ಹಿರಿಯಣ್ಣ: ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿ ಕುಮಾರಸ್ವಾಮಿ, ಇಬ್ರಾಹಿಂ ನನ್ನ ಹಿರಿಯಣ್ಣ ಇದ್ದಂತೆ. ಯಾವುದೇ ರಾಜಕೀಯ ಮಾತುಕತೆಯಾಗಿಲ್ಲ. ಇಬ್ರಾಹಿಂ ನಮ್ಮನೆಗೆ ದೊಡ್ಡಣ್ಣ. ಹಲವು ದಿನಗಳಿಂದ ಮಾತನಾಡಬೇಕು ಎನ್ನುತ್ತಿದ್ದರು. ಹೀಗಾಗಿ ಭೇಟಿಯಾಗಲು ಬಂದಿದ್ದೆ ಎಂದರು.
2008ರ ಅನುಭವ ಹಿನ್ನೆಲೆಯಲ್ಲಿ ಕಾಂಗ್ರೆ ನವರು ತಮ್ಮ ಕಾರ್ಪೊರೇಟರ್ಗಳನ್ನು ರೆಸಾಟ್ರ್ ಗೆ ಕಳಿಸಿರಬಹುದು. ನಮಗೆ ಸಂಖ್ಯಾಬಲವಿದೆ. ಯಾವುದೇ ಸಮಸ್ಯೆ ಇಲ್ಲ. ಜೆಡಿಎಸ್ನ್ನು ನಂಬಿದ್ದೆವು ಎಂದು ಬಿಜೆಪಿ ಯವರು ಹೇಳುತ್ತಾರೆ. ಆದರೆ 2008ರಲ್ಲಿ ನಮ್ಮನ್ನು ವಚನ ಭ್ರಷ್ಟರು ಎನ್ನುತ್ತಲೇ ಚುನಾವಣೆ ಎದುರಿಸಿರಲಿಲ್ಲವೇ ? ಈಗ ಹೊಸದಾಗಿ ನಂಬಿಕೆ ಎಲ್ಲಿಂದ ಬಂತು ? ನಾವು ಬಿಜೆಪಿ ಜತೆ ಹೋಗಿದ್ದರೆ ಪವಿತ್ರ ಮೈತ್ರಿ, ಕಾಂಗ್ರೆಸ್ ಜತೆ ಹೋದರೆ ಅಪವಿತ್ರ ಮೈತ್ರಿಯಾ? ಅವರು ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮಳೆ ಬಂದು ಪರಿಸ್ಥಿತಿ ಕೆಟ್ಟಿದೆ. ಈ ಸಂದರ್ಭದಲ್ಲಿ ಕಾರ್ಪೊರೇಟರ್ ಗಳು ನಮ್ಮ ಜತೆ ಇರಬೇಕಿತ್ತು. ಆದರೆ ಇದಕ್ಕೆ ಬಿಜೆಪಿಯವರೇ ಕಾರಣ. ಸೆಪ್ಟೆಂಬರ್ 11ರೊಳಗೆ ನಾನು ಪರಮೇಶ್ವರ ಭೇಟಿ ಮಾಡಬೇಕು ಎಂದೇನಿಲ್ಲ. ಆ ಬಳಿಕವೂ ಮಾತನಾಡಬಹುದು. ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ನನ್ನ ಸಹಾಯ ಬೇಕು ಎಂದಿದ್ದರೆ ಯಾವಾಗ ಬೇಕಾದರೂ ಮಾತನಾಡಬಹುದು ಎಂದರು.
ತಾಳಿ ಕಟ್ಟಿದ್ದೇವೆ:
ಸಿಎಂ ಇಬ್ರಾಹಿಂ ಮಾತನಾಡಿ ಬಿಜೆಪಿಯವರು ನಿಶ್ಚಿತಾರ್ಥ ಮಾಡಿಕೊಂಡು ಸುಮ್ಮನಾದರು. ಆದರೆ ಬುದ್ದಿವಂತರು ಯಾವಾಗಲೂ ನಿಶ್ಚಿತಾರ್ಥ ಮಾಡಿಕೊಂಡು ಸುಮ್ಮನಾಗುವುದಲ್ಲ. ತಾಳಿ ಕಟ್ಟಿ ಮುಂದಿನ ಮುಂದಿನ ಮಾತಾಡಬೇಕು. ಬುದ್ದಿವಂತರು ಹೋಗಿ ತಾಳಿ ಕಟ್ಟಿ ಕೆಲಸ ಮುಗಿಸಿದರು. ಮೈತ್ರಿ ಬಗ್ಗೆ ಇವತ್ತು ಚರ್ಚೆ ಮಾಡಿಲ್ಲ. ಅದನ್ನು ಪಕ್ಷದವರು ಈಗಾಗಲೇ ಚರ್ಚೆ ಮಾಡಿದ್ದಾರೆ. ಬಿಬಿಎಂಪಿ ವಿಭಜನೆ ಬಗ್ಗೆಯೂ ಚರ್ಚೆ ಮಾಡಿಲ್ಲ.ಯಾರು ಪವಿತ್ರ, ಅಪವಿತ್ರ ಎಂಬುದು ಜನರಿಗೆ ಗೊತ್ತಾಗಿದೆ ಎಂದರು.
Advertisement