ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಯಿಂದ ಕೈಗಾರಿಕಾ ಕ್ಷೇತ್ರದ ಮೇಲಾಗುತ್ತಿರುವ ಪರಿಣಾಮದ ಕುರಿತು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ನಿಯೋಗ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟಿತು.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಸಂಘದ ಅಧ್ಯಕ್ಷ ತಲ್ಲಂ ಆರ್.ದ್ವಾರಕನಾಥ್ ನೇತೃತ್ವದ ನಿಯೋಗ, ವಿದ್ಯುತ್ ಕೊರತೆಯಿಂದ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರವು ಸಮಸ್ಯೆ ಎದುರಿಸುತ್ತಿದ್ದು ಸರ್ಕಾರ ಸಮಸ್ಯೆ ನಿವಾರಿಸಲು ಗಮನ ನೀಡಬೇಕೆಂದು ಕೋರಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿದ್ಯುತ್ ಕೊರತೆಯಿಂದಾಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹೆಚ್ಚುವರಿ ವಿದ್ಯುತ್ ಖರೀದಿಗೆ ಎಲ್ಲ ಪ್ರಯತ್ನ ನಡೆಸಲಾಗಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹರಿಸಲು ಎಲ್ಲಾ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಎಫ್ ಕೆಸಿಸಿಐನಿಂದ ಆಚರಿಸುವ ಸರ್.ಎಂ.ವಿಶ್ವೇಶ್ವರಯ್ಯ ದಿನಾಚರಣೆಗೆ ಸಿಎಂರನ್ನು ಆಹ್ವಾನಿಸಲಾಯಿತು. ವಿದ್ಯುತ್ ಸಮಸ್ಯೆಯಿಂದಾಗಿ ಕೈಗಾರಿಕೆಗಳು ಸರಿಯಾಗಿ ನಡೆಯದಿರುವುದರಿಂದ ದಿನಕ್ಕೆ 200 ಕೋಟಿ ರು. ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ.
Advertisement