ಆಟ, ಕೀಟ, ನೋಟ; ಗಾರ್ಡನ್ ಕುರಿತು ಪಾಠ

ಈ ಬಾರಿ ಕೀಟಗಳ ಬಗ್ಗೆ ನಡೆಸಿದ ಪ್ರಾತ್ಯಕ್ಷಿಕೆ ಜನ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿ ವಾರವೂ ಈ ಕಾರ್ಯಕ್ರಮವನ್ನು ನಡೆಸುವಂತೆ ಸಾರ್ವಜನಿಕರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರತಿ ಭಾನುವಾರ ಕಬ್ಬನ್ ಉದ್ಯಾನದಲ್ಲಿ ವಾಹನ ನಿಷೇಧವಾಗಿರುವ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ ಕೀಟಗಳ ಬಗ್ಗೆ ನಡೆಸಿದ ಪ್ರಾತ್ಯಕ್ಷಿಕೆ ಜನ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿ ವಾರವೂ ಈ ಕಾರ್ಯಕ್ರಮವನ್ನು ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಹುಳುಗಳನ್ನು ನಿಯಂತ್ರಿಸುವುದು ಹೇಗೆ, ಹುಳುಗಳಿಂದಲೇ ಬೇರೆ ಕೀಟಗಳನ್ನು ಕೊಲ್ಲುವುದು ಹೇಗೆ ಎಂಬ ಕುರಿತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ವತಿಯಿಂದ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಪ್ರಾತ್ಯಕ್ಷಿಕೆ ನೀಡಿತು. ಇನ್ನು, ರಸ್ತೆಯಲ್ಲಿ ಯುವತಿಯರು ಫುಟ್‍ಬಾಲ್ ಆಡಿ ಮನರಂಜನೆ ಪಡೆದರೆ, ಸೈಕಲ್ ಓಡಿಸಿ ನಂತರ ದಣಿವಾರಿಸಿಕೊಳ್ಳಲು ಮರದ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಸಂತೋಷಪಡುತ್ತಿದ್ದ ದೃಶ್ಯಗಳು ಕಂಡುಬಂದವು.

ಮಕ್ಕಳು ಚಿಟ್ಟೆಗಳ ಸಂತತಿ ಬಗ್ಗೆ ಮಾಹಿತಿ ಪಡೆದರು. ಜಯನಗರದ ಜಯಶ್ರೀ ಅವರು ಚಿಕ್ಕ ಪಾಟ್‍ನಲ್ಲಿ ಕೂಡ ಮೀನಿಯೇಚರ್ ಗಾರ್ಡನ್ ಹೇಗೆ ಮಾಡುವುದು ಮನೆಯ ಒಳಗೇ ಗಾರ್ಡನ್‍ಗಳನ್ನು ತಯಾರಿಸುವುದು ಹೇಗೆ ಎನ್ನುವ ಕುರಿತು ಸಲಹೆ ನೀಡಿದರು. ಉದ್ಯಾನದಲ್ಲಿ ಉದಯರಾಗ ಕಾರ್ಯಕ್ರಮದಲ್ಲಿ ಸುಮಾ ಕಂಠಿ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 7ರಿಂದ ಯೂನಿವರ್ಸ್ ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಜಿ.ಜಿ. ಶಿರಿಷ ಮತ್ತು ತಂಡದಿಂದ ಭರತನಾಟ್ಯ, ಬೆಳಗ್ಗೆ 9ರಿಂದ 10ರವರೆಗೆ `ಚಿನ್ ಮುದ್ರ ಅಕಾಡೆಮಿ ಆಫ್ ಫರ್ಮಿಂಗ್ ಆಟ್ರ್ಸ್'ನಿಂದ ನೃತ್ಯ ಪ್ರದರ್ಶನ, ಸಂಜೆ 4ರಿಂದ ಕೆ.ಎಸ್. ನರಸಿಂಹ ಸ್ವಾಮಿಯವರ ಕಾವ್ಯಗಳ ಪರಿಚಯ ಕಾರ್ಯಕ್ರಮವನ್ನು ಸಾಹಿತಿ ಆರ್ .ಜಿ.ಹಳ್ಳಿ ನಾಗರಾಜ್ ನಡೆಸಿಕೊಟ್ಟರು. ಸಂಧ್ಯಾರಾಗದಲ್ಲಿ ಎಸ್.ರಾಮು ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಲಾಲ್‍ಬಾಗ್‍ನಲ್ಲೇನು ?
ಉದಯರಾಗದಲ್ಲಿ ತುಮಕೂರು ಪುಟ್ಟಮಾದಯ್ಯ ಅವರಿಂದ ಜಾನಪದ ಗಾಯನ ಹಾಗೂ ಸಂಧ್ಯಾರಾಗದಲ್ಲಿ ನಾಗಮಲೆ ಒಡೆಯ ಕಲಾ ಸಂಸ್ಕೃತಿ ಟ್ರಸ್ಟ್‍ನ ಎಂ.ಎನ್. ಸೌಮ್ಯಶ್ರೀಯವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಜತೆಗೆ ಲಾಲ್‍ಬಾಗ್ ಪಶ್ಚಿಮ ಗೇಟ್ ಹೊರಗೆ ಸ್ವಯಂ ಸೇವಕ ಸಂಸ್ಥೆಗಳಿಂದ ಭಗತ್‍ಸಿಂಗ್ ಹುಟ್ಟುಹಬ್ಬದ ಅಂಗವಾಗಿ ಸಿಹಿ ಹಂಚುವ ಕಾರ್ಯಕ್ರಮದ ಜತೆಗೆ ಪುಸ್ತಕಗಳನ್ನು ವಿತರಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com