
ಬೆಂಗಳೂರು: ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಲ್ಕೊತಾ ಮೂಲದ 22 ವರ್ಷದ ಯುವತಿಯನ್ನು ಕೋರಮಂಗಲದ ಕರ್ನಾಟಕ ಬ್ಯಾಂಕ್ ಬಳಿ ಫೆಬ್ರವರಿ 2 ರಂದು ಅಪಹರಣ ಮಾಡಲಾಗಿತ್ತು. ಸ್ನೇಹಿತೆಯನ್ನು ಭೇಟಿಯಾಗಲು ಅಶೋಕ ನಗರದಿಂದ ಕೋರಮಂಗಲಕ್ಕೆ ತೆರಳುತ್ತಿದ್ದಾಗ ಕಾರಿನಲ್ಲಿ
ಯುವತಿಯನ್ನು ಎಳೆದೊಯ್ದ ನಾಲ್ವರು ಆರೋಪಿಗಳು ಗೋಡೌನ್ ಒಂದರಲ್ಲಿ ಅತ್ಯಾಚಾರ ನಡೆಸಿದ್ದಾರೆ. ನಂತರ ಹೊಸೂರು ಬಳಿಯ ಆಡುಗೋಡಿ ಬಳಿ ಯುವತಿಯನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಯುವತಿ ಬಳಿಯಿದ್ದ 15 ಸಾವಿರ ರೂ. ಹಣ ಹಾಗೂ ಮೊಬೈಲ್ ದೋಚಿದ ಆರೋಪಿಗಳು ಆಕೆಗೆ ಚಾಕು ತೋರಿಸಿ ಕೂಗಾಡದಂತೆ ಬೆದರಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಸಂತ್ರಸ್ತೆ ನೀಡಿದ ಮಾಹಿತಿ ಮೇರೆಗೆ ಮೂವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ, ಇನ್ನೂ ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
Advertisement