ಬೆಂಗಳೂರು: ಆಟವಾಡಲು ಹೋದ ಮಗುವೊಂದು ಶವವಾಗಿ ಪತ್ತೆಯಾಗಿರುವ ಘಟನೆ ನಗರದ ಆರ್ ಟಿ ನಗರದಲ್ಲಿರುವ ಗೋಪಾಲಪ್ಪ ಪಾಳ್ಯದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ವಿಜಯ್ ಮಮತ್ತು ಸೀಮಾ ಇತ್ತೀಚೆಗಷ್ಟೇ ಗೋಪಾಲಪ್ಪ ಪಾಳ್ಯದ ಮನೆಗೆ ಶಿಫ್ಟ್ ಆಗಿದ್ದರು. ಗುರುವಾರ ಬೆಳಗ್ಗೆ ಈ ದಂಪತಿಯ ಮೂರು ವರ್ಷದ ಮಗು ತ್ರಿಷಾ ಮನೆಯ ಮುಂದೆ ಆಟವಾಡಲು ಹೋಗಿತ್ತು. ಆದರೆ ಸಂಜೆ ಆದರೂ ವಾಪಸ್ ಆಗಿರಲಿಲ್ಲ. ತಾಯಿ ಎಲ್ಲೆಡೆ ಹುಡುಕಾಡಿದರು ಮಗು ಸಿಗಲಿಲ್ಲ.
ಬ್ರಿಗೇಡ್ ರೋಡ್ ನ ಹೊಟೇಲ್ ವೊಂದರಲ್ಲಿ ಅಡುಗೆ ಕೆಲಸ ಮಾಡುವ ವಿಜಯ್ ಕೆಲಸ ಮುಗಿಸಿ ತಡರಾತ್ರಿ ಮನೆಗೆ ಬಂದಿದ್ದಾರೆ. ನಂತರ ದಂಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಮೇರೆಗೆ ಪೊಲೀಸರು ಮಗುವಿಗಾಗಿ ಹುಡಾಕಾಟ ನಡೆಸಿದಾಗ ದಂಪತಿಯ ಮನೆಯ ಪಕ್ಕದಲ್ಲೇ ಇದ್ದ ಕಸದ ರಾಶಿಯಲ್ಲಿ ಮಗು ಶವವಾಗಿ ಪತ್ತೆಯಾಗಿದೆ. ಮಗು ಉಸಿರು ಕಟ್ಟಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement