ಬೆಂಗಳೂರು: ಕಲಾವಿದನೊಬ್ಬನ ಕಲಾಕೃತಿಗೆ ಮನಸೋತ ಗೃಹ ಸಚಿವ ಜಿ. ಪರಮೇಶ್ವರ ಅವರು 95 ಸಾವಿರ ರು. ನೀಡಿ ಆಕರ್ಷಕ ಕಲಾಕೃತಿಯನ್ನು ಭಾನುವಾರ ಖರೀದಿ ಮಾಡಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಭಾನುವಾರ ನಡೆದ ಚಿತ್ರ ಸಂತೆಯನ್ನು ಉದ್ಘಾಟಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಲಾವಿದರ ಆಕರ್ಷಕ ಚಿತ್ರಗಳನ್ನು ನೋಡಿ ಮನಸೋತರು. ಅಲ್ಲದೆ ಉತ್ತರ ಪ್ರದೇಶ ಮೂಲದ ಕಲಾವಿದನೊಬ್ಬ ಬಿಡಿಸಿದ್ದ ಸುಂದರ ಕಲಾಕೃತಿಯನ್ನು 95 ಸಾವಿರ ರು. ನೀಡಿ ಖರೀದಿಸಿ ಕಲಾವಿದನನ್ನು ಪ್ರೋತ್ಸಾಹಿಸುವ ಮೂಲಕ ತಮ್ಮ ಕಲಾಸಕ್ತಿಯನ್ನು ತೋರಿದರು.
ಉತ್ತರ ಪ್ರದೇಶದ ಅಂಗವಿಕಲ ಕಲಾವಿದ ಮೋಹಿತ್ ವರ್ಮಾ ಎಂಬುವವರು `ಸಂಜೆಯ ದೀಪದ ಬೆಳಕಿನಲ್ಲಿ ಅಲಂಕೃತಗೊಂಡು ಗಂಡನ ನಿರೀಕ್ಷೆಗಾಗಿ ಕಾದು ಕುಳಿತಿರುವ ಸುಂದರ ಮಹಿಳೆ’ಯ ಅಪೂರ್ವ ಕಲಾಕೃತಿ ರಚಿಸಿದ್ದರು. ಚಿತ್ರಸಂತೆಯ ಉದ್ಘಾಟನೆಗೂ ಮುನ್ನ ಚಿತ್ರ ಕಲಾವಿದರ ಕಲಾಕೃತಿಗಳನ್ನು ವೀಕ್ಷಿಸುತ್ತಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಈತ ರಚಿಸಿದ್ದ ಕಲಾಕೃತಿಯನ್ನು ಯಾವುದೇ ಚೌಕಾಸಿ ಮಾಡದೆ ಖರೀದಿಸಿ ಸಂತಸಪಟ್ಟರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಮ್ಮ ಕೃತಿಯನ್ನು ಖರೀದಿಸಿದ್ದಕ್ಕೆ ಸಂತಸಗೊಂಡ ಕಲಾವಿದ ಮೋಹಿತ್ ವರ್ಮಾ ಇದು ತಮ್ಮ ಜೀವನದ ಅವಿಸ್ಮರಣೀಯ ಕ್ಷಣ ಎಂದು ಬಾವುಕರಾದರು.
Advertisement