ಬಿತ್ತರವಾಯ್ತು ಬಣ್ಣ ಬಣ್ಣದ ಕಲಾಲೋಕ

ಕಣ್ಣು ಹಾಯಿಸಿದ ಕಡೆಯೆಲ್ಲಾ ಬಣ್ಣ ಬಣ್ಣದ ಚಿತ್ತಾರ. ಬುದಟಛಿ, ಮದರ್ ತೆರೇಸಾ, ರಾಧೆ, ಕೃಷ್ಣ, ಮೊನಾಲಿಸಾ ಎಲ್ಲರೂ ಅಲ್ಲಿ ಕಲಾವಿದನ ಕುಂಚದಲ್ಲಿ ಅರಳಿ ನಿಂತಿದ್ದರು...
ಬಿತ್ತರವಾಯ್ತು ಬಣ್ಣ ಬಣ್ಣದ ಕಲಾಲೋಕ
ಬಿತ್ತರವಾಯ್ತು ಬಣ್ಣ ಬಣ್ಣದ ಕಲಾಲೋಕ

ಬೆಂಗಳೂರು: ಕಣ್ಣು ಹಾಯಿಸಿದ ಕಡೆಯೆಲ್ಲಾ ಬಣ್ಣ ಬಣ್ಣದ ಚಿತ್ತಾರ. ಬುದಟಛಿ, ಮದರ್ ತೆರೇಸಾ, ರಾಧೆ, ಕೃಷ್ಣ, ಮೊನಾಲಿಸಾ ಎಲ್ಲರೂ ಅಲ್ಲಿ ಕಲಾವಿದನ ಕುಂಚದಲ್ಲಿ ಅರಳಿ ನಿಂತಿದ್ದರು.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಕ್ಷರಶಃ ಇಲ್ಲಿ ಕಲಾ ಜಗತ್ತೇ ಮೇಳೈಸಿತ್ತು. ಒಂದೊಂದು ಚಿತ್ರಗಳು ಒದಕ್ಕಿಂತ ಒಂದು ಚೆಂದ. ಕಲಾವಿದನ ಕುಂಚದಲ್ಲಿ ಒಡಮೂಡಿದ ಆ ಕಲೆಯನ್ನು ವರ್ಣಿಸಲಸದಳ. ಈ ಎಲ್ಲ ಸಂಗತಿ ಕಂಡುಬಂದಿದ್ದು ಕುಮಾರಕೃಪಾ ರಸ್ತೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ ಚಿತ್ರಸಂತೆಯಲ್ಲಿ. ಚಿತ್ರಕಲಾವಿದರು, ಕಲಾಸಕ್ತರಿಂದ ಸಂತೆ ತುಂಬಿ ತುಳುಕುತ್ತಿತ್ತು. ಈ ಸಂತೆಯಲ್ಲಿ ಅಪೂರ್ವ ಕಲಾಕೃತಿಗಳ ವೀಕ್ಷಣೆ, ಖರೀದಿ ಭರಾಟೆಯೂ ಭರದಿಂದ ಸಾಗಿತ್ತು.

ಕುಮಾರಕೃಪಾ ರಸ್ತೆ, ಅಕ್ಕಪಕ್ಕದ ಅಡ್ಡರಸ್ತೆಗಳು ಪರಿಷತ್‍ನ ಆವರಣ ಹೀಗೆ ಎಲ್ಲೆಡೆ ಕಲಾವಿದರು ಹಾಗೂ ಕಲಾಸಕ್ತರ ಗೌಜು, ಗದ್ದಲದ್ದೇ ಕಾರುಬಾರು. ಎಲ್ಲಿ ನೋಡಿದರೂ ಸುಂದರ, ಅಪೂರ್ವ, ಕಲಾಕೃತಿಗಳು ಕಣ್ಣಿಗೆ ರಾಚುತ್ತಿದ್ದವು. ಯಕ್ಷಗಾನಕ್ಕೆ ಸಂಬಂಧಿಸಿದ ಚಿತ್ರ, ತಾಯಿ ಮಗುವನ್ನು ಆಲಂಗಿಸುತ್ತಿರುವುದು, ತಾಯಿ ಸ್ನಾನ ಮಾಡಿಸುತ್ತಿರುವಾಗ ಮಗುವಿನ ರೋದನ, ಮಗಳಿಗೆ ತಾಯಿ ಹೂ ಮೂಡಿಸುತ್ತಿರುವ ಮಮತೆ ಚಿತ್ರಗಳಿದ್ದವು. ಜೊತೆಗೆ ಇತಿಹಾಸ ಸಾರುವ ಹಂಪಿ, ಚಿತ್ರದುರ್ಗದ ಕೋಟೆಕೊತ್ತಲಗಳು, ಪ್ರಕೃತಿ ಸೌಂದರ್ಯ, ದೇವಸ್ಥಾನಗಳು, ದೇವಾನುದೇವತೆಗಳ ಚಿತ್ರಗಳನ್ನು ಕಲಾವಿದ ಕುಂಚದಲ್ಲಿ ಸೆರೆಹಿಡಿದು ನಾನಾ ಬಣ್ಣದ ಆಕಾರ ನೀಡಿದ್ದು ಎಲ್ಲರ ಗಮನ ಸೆಳೆದವು.

ಸಂತಸ ಪಟ್ಟ ಮಕ್ಕಳು: ಚಿತ್ರ ಸಂತೆಗೆ ಪೋಷಕರೊಂದಿಗೆ ಆಗಮಿಸಿದ್ದ ಮಕ್ಕಳು, ವನ್ಯಪ್ರಾಣಿಗಳು, ಪಕ್ಷಿಗಳನ್ನು ಕಂಡು ಸಂತಸಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಷ್ಟೇ ಅಲ್ಲ ಚಿತ್ರ ಕಲಾಕೃತಿಗಳನ್ನು ನೋಡಿ ಮಕ್ಕಳು ಮೈಮರೆತಿದ್ದರು. ಅಷ್ಟೇ ಅಲ್ಲ, ಅಲ್ಲಿಯೋ ತಮ್ಮ ಚಿತ್ರಗಳನ್ನು ಕಲಾವಿದರಿಂದ ರೂಪಿಸಿಕೊಳ್ಳುತ್ತಿದ್ದರು. ಇವುಗಳನ್ನು ಕಂಡು ಪೋಷಕರ ಮೊಗದಲ್ಲಿಯೂ ಸಂತಸ ಒಡಮೂಡುತ್ತಿತ್ತು. ಆಟಿಕೆಗಳು, ಬಲೂನ್‍ಗಳು, ಅಲಂಕಾರಿಕ ವಸ್ತುಗಳು, ಬಟ್ಟೆಗಳ ಮಾರಾಟ, ತಿಂಡಿ ತಿನಿಸುಗಳು ಹೀಗೆ ಜಾತ್ರೆಯಲ್ಲಿ ನೂರಾರು ಆಕರ್ಷಕ ವಸ್ತುಗಳ ಪ್ರದರ್ಶನ ಕೂಡ ಇತ್ತು. ನೂರು ರುಪಾಯಿಯಿಂದ 1 ಲಕ್ಷ ರುಪಾಯಿವರೆಗಿನ ಕಲಾಕೃತಿಗಳನ್ನು ಮಾರಾಟ ಮಾಡಲಾಯಿತು.

ಸ್ವಚ್ಛತೆ ಆದ್ಯತೆ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ರಸ್ತೆಯ ಸುತ್ತಮುತ್ತ ನೂರಾರು ಸ್ವಯಂ ಸೇವಕರು ಕಸ ಆಗದಂತೆ ಎಚ್ಚರ ವಹಿಸಿದ್ದರು. ಈ ಬಾರಿ ಅಂಧರು, ವಿಕಲ ಚೇತನ ಕಲಾವಿದರಿಗಾಗಿ ಆವರಣದ ಒಳಗೆ ಮಳಿಗೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರಸಂತೆಗೆ ಸುಮಾರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಕಲಾವಿದರಿಗಾಗಿ, ಸಾವಿರಕ್ಕಿಂತಲೂ ಹೆಚ್ಚು ಮಳಿಗೆ ರೂಪಿಸಲಾಗಿತ್ತು. ಹೊರ ರಾಜ್ಯದ ಕಲಾವಿದರು: ಕರ್ನಾಟಕ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಉತ್ತರ ಪ್ರದೇಶದ ಕಡೆಯಿಂದ ಕಲಾವಿದರು ಆಗಮಿಸಿದ್ದರು.

ಈ ಚಿತ್ರ ಸಂತೆಯಲ್ಲಿ ಸಾಂಪ್ರದಾಯಿಕ ಮೈಸೂರು ಶೈಲಿ, ತಂಜಾವೂರು ಶೈಲಿ, ರಾಜಸ್ಥಾನಿ ಮಧುಬನಿ, ತೈಲ ಮತ್ತು ಜಲವರ್ಣದ ಚಿತ್ರಗಳು ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿದ ಚಿತ್ರಗಳು ಕೊಲಾಜ್, ಲಿತೋ-ಗ್ರಾಫ್, ಎಂಬೋ ಸಿಂಗ್ ಕಲಾಕೃತಿಗಳನ್ನು ಮಾರಾಟ ಮಾಡಿದರು. ಚಿತ್ರಸಂತೆಯ ವರ್ಣಲೋಕದಲ್ಲಿ ಆಸಕ್ತರ ಭಾವಚಿತ್ರಗಳನ್ನು ಕಲಾವಿದರು ವೀಕ್ಷಕರ ಮುಂದೆ ಕೆಲವೇ ನಿಮಿಷಗಳಲ್ಲಿ ಬಿಡಿಸಿ ಕೊಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com