ಖಾಸಗಿ ಡಯಗ್ನೋಸ್ಟಿಕ್ ಲ್ಯಾಬ್ ನವರ ದುಬಾರಿ ಶುಲ್ಕಕ್ಕೆ ಸಿಲುಕಿ ನರಳಿದ್ದ ರೋಗಿಗಳಿಗೆ ನೆಮ್ಮದಿ ಸುದ್ದಿ
ರಾಜ್ಯ ಸರ್ಕಾರ ಮೊದಲ ಬಾರಿಗೆ ನಗರದ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ಆರಂಭಿಸಿರುವ `ಜನಸಾಮಾನ್ಯರ ಡಯಾಗ್ನೋಸ್ಟಿಕ್ ಲ್ಯಾಬ್' ಇನ್ನು ಮುಂದೆ ಜನರಿಗೆ ಕೈಗೆಟುಕುವ ದರದಲ್ಲಿ ಸೇವೆ ನೀಡಲಿದ್ದು, ಇಂತಹ ನೂತನ ವಿಧಾನಕ್ಕೆ ಸೋಮವಾರ ರಾಜ್ಯಪಾಲ ವಜುಬಾಯಿ ರುಢಬಾಯಿ ವಾಲಾ ಚಾಲನೆ ನೀಡಿದರು.
ದಿನದ 24 ಗಂಟೆಗಳ ಕಾರ್ಯನಿರ್ವಹಿಸುವ ಈ ಲ್ಯಾಬ್ ಸದ್ಯ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಾತ್ರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆ, ಘೋಷಾ ಸರ್ಕಾರಿ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ಹಾಗೂ ತುಮಕೂರು, ಉಡುಪಿ, ಮಂಗಳೂರು, ಚಿತ್ರದುರ್ಗ, ಬಾಗಲಕೋಟೆ, ಕೋಲಾರ್, ದಾವಣಗೆರೆ, ಮೈಸೂರು, ಮಂಡ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯಾರಂಭವಾಗಲಿವೆ.
ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಇಮೇಜಿಂಗ್ ಮತ್ತು ಪ್ರಯೋಗಾಲಯ ಪರೀಕ್ಷೆಗಳಿಗೆ ಹೆಚ್ಚು ಹಣ ತಗಲುತ್ತಿತ್ತು. ಈ ಕೇಂದ್ರಗಳಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜನರಿಗೆ ಸೇವೆ ನೀಡುವುದು ಸರ್ಕಾರದ ಉದ್ದೇಶವಾಗಿದೆ.
ಯಾವ ಸೇವೆಗೆ ಎಷ್ಟು ಹಣ?: ಎಂಆರ್ಐ ಸ್ಪಿನ್, ಎಂಆರ್ಐ ನೆಕ್, ಎಂಆರ್ಐ ಜಾಯಿಂಟ್ಸ್, ಎಂಆರ್ಐ ಅಪ್ಪರ್ ಲೋಯರ್ ಎಕ್ಸ್ ಟ್ರಿಮೆಂಟ್ - 3.500, ಎಂಆರ್ಎ-ಎಂಆರ್ವಿ ಎಂಆರ್ಎಸ್,ಎಂಆರ್ಐ ಅಬ್ಡೋಮನ್ - ರು.4000, ಸ್ಪಿನ್ ಸ್ಕ್ರೀನಿಂಗ್- ರು. 1700, ಸಿಟಿ ಸ್ಕ್ಯಾನ್ ಕೆ ರು.2000, ಸಿಟಿ ಸ್ಕ್ಯಾನ್ ಫೆಲ್ವಿಸ್-ರು. 2000, ಸಿಟಿ ಅಬ್ಡೋಮನ್- ರು.2000 ನಿಗದಿಪಡಿಸಲಾಗಿದೆ.
ಇದೇ ವೇಳೆ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ವಜುಬಾಯಿ ವಾಲಾ, ಆರೋಗ್ಯ ಮತ್ತು ಶಿಕ್ಷಣ ಉಚಿತವಾಗಿ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಬಿಪಿ ಎಲ್, ಎಪಿಎಲ್ ಕಾರ್ಡುದಾರರು ಮತ್ತು ಎಸ್ಸಿ-ಎಸ್ಟಿ ವರ್ಗದವರಿಗೆ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ಸಿಗಬೇಕು. ಮಧ್ಯಮ ವರ್ಗವನ್ನು ಕಡೆಗಣಿಸದೆ ಈ ಸೌಲಭ್ಯ ನೀಡಿದರೆ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ. ಇಡೀ ದೇಶದಲ್ಲಿಯೇ ರಿಯಾಯಿತಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವು ದರಲ್ಲಿ ಕರ್ನಾಟಕವೇ ಮೊದಲು
ಸಿ.ಎಂ ಸಾಂತ್ವನ ಯೋಜನೆ: ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, ಕರ್ನಾಟಕದ ಗಡಿ ಪ್ರವೇಶಿಸುವ ಪ್ರವಾಸಿಗರು ಅಥವಾ ವಿದೇಶಿಗರು ಅನಾರೋಗ್ಯಕ್ಕೆ ತುತ್ತಾದರೆ 48 ಗಂಟೆಯೊಳಗೆ ಚಿಕಿತ್ಸೆನೀಡುವ `ಮುಖ್ಯಮಂತ್ರಿ ಸಾಂತ್ವನ ಯೋಜನೆ ಜಾರಿಗೆ ತರುತ್ತಿದ್ದೇವೆ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಆರಂಭಿಸಿರುವ ಲ್ಯಾಬೋರೇಟರಿಯಿಂದ ಸಾಮಾನ್ಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಕೈಗೆಟುವ ದರದಲ್ಲಿ ನಾನಾ ಪರೀಕ್ಷೆಗಳನ್ನು ನಡೆಸಲಾ ಗುವುದು ಎಂದು ತಿಳಿಸಿದರು.