ಲೋಕಾಯುಕ್ತ ನೇಮಕ ಇನ್ನೂ ಎರಡು ದಿನ ತಡ?

ರಾಜ್ಯ ಲೋಕಾಯುಕ್ತ ಆಯ್ಕೆ ವಿಚಾರವಾಗಿ ಸರ್ಕಾರ ಕೊಂಚ ಜಿಜ್ಞಾಸೆಗೆ ಸಿಲುಕಿದೆ. ಇದರಿಂದಾಗಿ ರಾಜ್ಯಪಾಲರಿಗೆ ಲೋಕಾಯುಕ್ತ ಕುರಿತ ಶಿಫಾರಸು ಸಲ್ಲಿಸುವುದು ಇನ್ನೆರಡು ದಿನಗಳಷ್ಟು ತಡವಾಗುವ ಸಾಧ್ಯತೆ ಇದೆ. ಲೋಕಾಯುಕ್ತ ಹುದ್ದೆಗೆ ನ್ಯಾ. ಎಸ್.ಆರ್.ನಾಯಕ್ ಮತ್ತು ನ್ಯಾ. ವಿಕ್ರಮ್ ಜಿತ್ ಸೆನ್...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯ ಲೋಕಾಯುಕ್ತ ಆಯ್ಕೆ ವಿಚಾರವಾಗಿ ಸರ್ಕಾರ ಕೊಂಚ ಜಿಜ್ಞಾಸೆಗೆ ಸಿಲುಕಿದೆ. ಇದರಿಂದಾಗಿ ರಾಜ್ಯಪಾಲರಿಗೆ ಲೋಕಾಯುಕ್ತ ಕುರಿತ ಶಿಫಾರಸು ಸಲ್ಲಿಸುವುದು ಇನ್ನೆರಡು ದಿನಗಳಷ್ಟು ತಡವಾಗುವ ಸಾಧ್ಯತೆ ಇದೆ. ಲೋಕಾಯುಕ್ತ ಹುದ್ದೆಗೆ ನ್ಯಾ. ಎಸ್.ಆರ್.ನಾಯಕ್ ಮತ್ತು ನ್ಯಾ. ವಿಕ್ರಮ್ ಜಿತ್ ಸೆನ್ ನಡುವೆ ಯಾರನ್ನು ಆಯ್ಕೆ ಮಾಡಬೇಕೆಂದು ಜಿಜ್ಞಾಸೆ ಉಂಟಾಗಿದೆ.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್.ಆರ್.ನಾಯಕ್ ಅವರಿಗೆ ಅಸ್ತು ಎಂದಿದ್ದಾರೆ. ಆದರೆ ಅದನ್ನು ನೇರ ರಾಜಭವನಕ್ಕೆ ಕಳುಹಿಸಲು ಕೊಂಚ ಯೋಚನೆ ಮಾಡುತ್ತಿದ್ದಾರೆ. ಅಂದರೆ ನ್ಯಾ. ಎಸ್.ಆರ್.ನಾಯಕ್ ಆಯ್ಕೆ ಮಾಡಿದರೆ ಅದಕ್ಕೆ ಹೇಗೆಲ್ಲಾ ವಿರೋ ಧಗಳು ಬರಬಹುದು, ನ್ಯಾ. ವಿಕ್ರಮïಜಿತ್ ಸೆನ್ ಹೆಸರು ಶಿಫಾರಸು ಮಾಡಿದರೆ ಯಾವ ಪರಿಣಾಮವಾಗಬಹುದು ಎಂಬ ಆಲೋಚನೆಯಲ್ಲಿ ಅವರು ತೊಡಗಿದ್ದಾರೆ.

ಒಂದೊಮ್ಮೆ ಎಸ್.ಆರ್.ನಾಯಕ್ ಹೆಸರು ಶಿಫಾರಸು ಮಾಡಿ ಅದನ್ನು ರಾಜ್ಯಪಾಲರು ತಿರಸ್ಕರಿಸಿದರೆ ಸರ್ಕಾರ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಆತಂಕ ಕೂಡ ಸಿದ್ದರಾಮಯ್ಯ ಅವರಲ್ಲಿದೆ. ಆದರೆ ಕನ್ನಡಿಗರೇ ಲೋಕಾಯುಕ್ತರಾಗಬೇಕೆನ್ನುವ ಒತ್ತಡ ಅವರ ಮೇಲೆ ತೀವ್ರವಾಗುತ್ತಿದ್ದು, ಕನ್ನಡಿಗ, ಸ್ನೇಹಿತರೂ ಆದ ಎಸ್.ಆರ್. ನಾಯಕ್ ಅವರನ್ನು ಬಿಟ್ಟುಕೊಡಲು ಸಿದ್ದರಾಮಯ್ಯ ಅವರಿಗೆ ಮನಸ್ಸಿಲ್ಲ. ಹೀಗಾಗಿ ಮುಖ್ಯಮಂತ್ರಿ ಅವರು ಒಂದು ರೀತಿಯಲ್ಲಿ ಜಿಜ್ಞಾಸೆಗೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಾಗೆಯೇ ವಿವಿಧ ಕೋನಗಳಲ್ಲಿ ಲೆಕ್ಕಾಚಾರಗಳನ್ನು ಮಾಡಿ ವಿಶ್ಲೇಷಿಸಿ ರಾಜಭವನಕ್ಕೆ ಶಿಫಾರಸು ಕಳುಹಿಸಲು ಮುಖ್ಯಮಂತ್ರಿ ಅವರಿಗೆ ಸದ್ಯಕ್ಕೆ ಪುರಸೋತ್ತಿಲ್ಲ. ರಾಜ್ಯಪಾಲರಿಗೆ ಶಿಫಾರಸು ಅವಸರವೂ ಅವರಿಗಿಲ್ಲ. ಅಷ್ಟಕ್ಕೂ ಲೋಕಾಯುಕ್ತ ಕುರಿತ ಹೆಸರನ್ನು ಬೇಗ ಕಳುಹಿಸಬೇಕೆನ್ನುವ ಒತ್ತಡ ಕೂಡ ಎಲ್ಲಿಂದಲೂ ಬಂದಿಲ್ಲ. ಆದ್ದರಿಂದ ಇನ್ನಷ್ಟು ದಿನ ಸಾರ್ವಜನಕ ಚರ್ಚೆಗಳು ಏನಾಗುತ್ತವೆ ಎಂದು ನೋಡುವ ತಂತ್ರ ಮುಖ್ಯಮಂತ್ರಿ ಅವರದಾಗಿದೆ.  ಇದೇ ಸಮಯದಲ್ಲಿ ಕೆಲವು ಮುಖಂಡರು ಮತ್ತು ಹೋರಾಟಗಾರರಿಂದ ಬರುವ ಅಭಿಪ್ರಾಯಗಳನ್ನು ಆಲಿಸಿ ಅಂತಿಮವಾಗಿ ಮುಚ್ಚಿದ ಲಕೋಟೆಯಲ್ಲಿ ರಾಜ್ಯಭವನಕ್ಕೆ ಶಿಫಾರಸು ಕಳುಹಿಸಲಿದ್ದಾರೆ.

ಈ ಮಧ್ಯೆ ಜಿಲ್ಲಾಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಜ್ವರ ಶುರುವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಈಗಾಗಲೇ ಪ್ರವಾಸ ಹೆಸರಿನಲ್ಲಿ ಅಭ್ಯರ್ಥಿ ಆಯ್ಕೆ ಮತ್ತು ಪ್ರಚಾರ ಕಾರ್ಯಗಳನ್ನೂ ಶುರು ಮಾಡಿವೆ. ಹೀಗಾಗಿ ಕಾಂಗ್ರೆಸ್ ಇನ್ನೂ ಕಾರ್ಯಾಚರಣೆ ಆರಂಭಿಸದ ಕಾರಣ ಮುಖ್ಯಮಂತ್ರಿ ಅವರಿಗೆ ಈಗ ಲೋಕಾಯುಕ್ತದಷ್ಟೇ ಮುಖ್ಯವಾಗಿ ಪಂಚಾಯಿತಿ ಚುನಾವಣೆ ಕಡೆಗೂ ದಿಗಿದಿದೆ. ಆದ್ದರಿಂದ ಇನ್ನೆರಡುದಿನಗಳ ಕಾಲ ಚರ್ಚೆ, ಸಮಾಲೋಚನೆಗಳನ್ನು  ನಡೆಸಿ ನಂತರ ಲೋಕಾಯುಕ್ತ ಅಭ್ಯರ್ಥಿ ಆಯ್ಕೆ ಮಾಡಲು ಸಿದ್ದರಾಮಯ್ಯ ಯೋಚಿಸಿದ್ದಾರೆಂದು ಮೂಲಗಳು ಹೇಳಿವೆ.

ಸೆನ್ ಪರ ಶೆಟ್ಟರ್ ಬ್ಯಾಟಿಂಗ್: ಲೋಕಾಯುಕ್ತ ಆಯ್ಕೆ ವಿಚಾರವಾಗಿ ನಡೆದ ಸಭೆಯಲ್ಲಿ ಕನ್ನಡಿಗ ಅಥವಾ ಕನ್ನಡೇತರ ವಿಚಾರ ಪ್ರಸ್ತಾಪವಾಗಲೇ ಇಲ್ಲ. ನಾವೆಲ್ಲಾ ನ್ಯಾ.ವಿಕ್ರಮ್ ಜಿತ್ ಸೆನ್ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಮುಖ್ಯಮಂತ್ರಿಯವರು ಉತ್ತಮರನ್ನು ಆಯ್ಕೆ ಮಾಡುತ್ತಾರೆಂದು ಭಾವಿಸಿದ್ದೇವೆ. ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳು ಶಿಫಾರಸು ಮಾಡಿರುವ ನ್ಯಾ.ವಿಕ್ರಮ್ ಜಿತ್ ಸೆನ್ ಅವರನ್ನೇ ಲೋಕಾಯುಕ್ತರನ್ನಾಗಿ ಮಾಡಬೇಕೆಂಬುದು ನಮ್ಮ ಸಲಹೆಯಾಗಿತ್ತು, ಮುಖ್ಯಮಂತ್ರಿಯವರು ಆದಷ್ಟು ಶೀಘ್ರವಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.

ನ್ಯಾ.ಎಸ್.ಆರ್.ನಾಯಕ್ ಆರೋಪಗಳ ಕುರಿತು ತಮಗೇನು ಮಾಹಿತಿ ಇಲ್ಲ. ಕೆಲವರು ಆ ವಿಚಾರ ಮಾತನಾಡುತ್ತಿದ್ದಾರೆ, ಪತ್ರಿಕೆಗಳಲ್ಲೂ ಮಾಹಿತಿ ಬರುತ್ತಿದೆ. ಹೀಗಾಗಿ ಊಹಾಪೋಹ ಸಂಶಯಾತ್ಮಕ ಸನ್ನಿವೇಶದಲ್ಲಿ ಉತ್ತಮರನ್ನು ಆಯ್ಕೆ ಮಾಡುವುದು ಸೂಕ್ತ ಎಂಬುದು ನನ್ನ ಸಲಹೆ. ಉಪ ಲೋಕಾಯುಕ್ತ ಹುದ್ದೆಗೆ ನ್ಯಾ.ಆನಂದ್ ಅವರ ಹೆಸರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸ್ತಾಪಿಸಿದ್ದರು.

ನಾವು ಒಪ್ಪಿದೆವು. ರಾಜ್ಯದ ಜನರೂ ಸಹ ಸಭ್ಯರನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಭ್ರಷ್ಟಾಚಾರದಿಂದಾಗಿ ಲೋಕಾಯುಕ್ತ ಕಚೇರಿಗೆ ಕೆಟ್ಟ ಹೆಸರು ಬಂದಿದೆ. ಇಂತಹ ಸಂದರ್ಭದಲ್ಲಿ ಆಯ್ಕೆಯು ಸಂಶಯಾಸ್ಪದವಾಗಿರಬಾರದು. ವಿವಾದವಿಲ್ಲದ ವ್ಯಕ್ತಿಗಳೇ ಲೋಕಾಯುಕ್ತ ಹುದ್ದೆ ಅಲಂಕರಿಸಿದರೆ ಉತ್ತಮ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com