ಹೆಲ್ಮೆಟ್ ಕಡ್ಡಾಯ ನಿಯಮದ ಮೊದಲ ದಿನ: ಹೆಲ್ಮೆಟ್ ಧರಿಸದ ಹಿಂಬದಿ ಸವಾರರನ್ನು ತಡೆದರು, ಎಚ್ಚರಿಸಿ ಕಳುಹಿಸಿದರು

ನೂತನ ನಿಯಮಕ್ಕೆ ಮೊದಲ ದಿನ ಸವಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆರಳಣಿಕೆಯಷ್ಟು ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ ನೀಯಮ ಪಾಲಿಸಿದರು.
ಹೆಲ್ಮೆಟ್ ಧರಿಸದ ಹಿಂಬದಿ ಸವಾರರು
ಹೆಲ್ಮೆಟ್ ಧರಿಸದ ಹಿಂಬದಿ ಸವಾರರು

ಬೆಂಗಳೂರು: ಪರ ವಿರೋಧಗಳ ನಡುವೆಯೂ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ ಮಂಗಳವಾರದಿಂದ ರಾಜ್ಯಾದ್ಯಂತ ಜಾರಿಗೆ ಬಂದಿದ್ದು,  ನೂತನ ನಿಯಮಕ್ಕೆ ಮೊದಲ ದಿನ ಸವಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆರಳಣಿಕೆಯಷ್ಟು ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ ನೀಯಮ ಪಾಲಿಸಿದರು.

ಮೊದಲ ದಿನವಾದ್ದರಿಂದ ಪೊಲೀಸರು ಸಹ ಸವಾರರನ್ನು ಹಿಡಿದು ದಂಡ ಹಾಕುವ ಗೋಜಿಗೆ ಹೋಗಲಿಲ್ಲ. ಹೊಸ ನಿಯಮಕ್ಕೆ ಹೊಂದಿಕೊಳ್ಳಲು ಸವಾರರಿಗೆ ಜ.20ರ ವರೆಗೆ ಕಾಲಾವಕಾಶ ನೀಡಲಾಗಿದೆ. ಅಂತೆಯೇ ಹೆಲ್ಮೆಟ್ ಧರಿಸುವುದರಿಂದ ಆಗುವ ಸಾಧಕಗಳ ಬಗ್ಗೆ ಸಂಚಾರಿ ಪೊಲೀಸರು ಈಗಾಗಲೇ ಸವಾರರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.

ಸವಾರರ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ನಿಯಮ ಜಾರಿಗೊಳಿಸಲಾಗಿದೆ. ಡಿ.31ರಂದು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ನಿಯಮದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಸಂಬಂಧ ಪ್ರತಿಭಟನೆ, ಅಣುಕು ಪ್ರದರ್ಶನ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಆದರೆ, ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಮೇರೆಗೆ ನಿಯಮ ಜಾರಿಗೆ ತಂದು ನಿಗದಿತ ಅವಧಿಯಲ್ಲಿ ಅನುಷ್ಠಾನ ವರದಿ ಸಲ್ಲಿಸಬೇಕಾದ ಸಂದಿಗ್ಧತೆಗೆ ಸಿಲುಕಿದ ಸರ್ಕಾರ, ಎಷ್ಟೇ ವಿರೋಧ ಎದುರಾದರೂ ನಿಯಮ ಜಾರಿಗೊಳಿಸುವಲ್ಲಿ ಯಶಸ್ವಿಯಾಯಿತು. ಸವಾರರ ಸುರಕ್ಷತೆ ಸಲುವಾಗಿ ನಿಯಮ ಜಾರಿ ಸರಿ. ಆದರೆ, ಇದರ ಅನುಷ್ಠಾನ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದು ಸರ್ಕಾರವೂ ಸೇರಿದಂತೆ ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com