ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ರೌಡಿಗಳ ಅಟ್ಟಹಾಸ ಮುಂದುವರಿದಿದ್ದು, ರೌಡಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ಹೆಬ್ಬಾಳ ಬಳಿಯ ಗುಡ್ಡದಹಳ್ಳಿ ಸರ್ಕಲ್ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಬ್ಬಾಳ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಸತೀಶ್ ಆಲಿಯಾಸ್ ಗುಂಡ(30ವರ್ಷ) ಎಂಬಾತನನ್ನು ಮತ್ತೊಂದು ಗುಂಪು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಟೀ ಕುಡಿಯಲು ಗುಡ್ಡದಹಳ್ಳಿ ಸರ್ಕಲ್ ಗೆ ಬಂದಿದ್ದ ರೌಡಿ ಗುಂಡನನ್ನು ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ಪೈಕಿ ಇಬ್ಬರು ಮಂಚು ಲಾಂಗ್ ಗಳಿಂದ ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಿದ್ದಾರೆ.
ರಸ್ತೆಯ ಮಧ್ಯದಲ್ಲೇ ನಡೆದ ರೌಡಿ ಗುಂಡನ ಕೊಲೆಯ ಭಯಾನಕ ದೃಶ್ಯ ನೋಡಿದ ಸ್ಥಳೀಯರು ಭಯಭೀತರಾಗಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಡಿಸಿಪಿ ಸುರೇಶ್ ಅವರು ಪರಿಶೀಲನೆ ನಡೆಸಿದ್ದಾರೆ.
ಸತೀಶ್ ಅಳಿಯಾಸ್ ಗುಂಡನನ್ನು ಎದುರಾಳಿ ಗುಂಪಿನ ದುಷ್ಕರ್ಮಿಗಳು ಹತ್ಯೆ ಮಾಡಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು, ಆರೋಪಿ ಮಹೇಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.