ಯಲಹಂಕದಲ್ಲಿ ಸರಗಳ್ಳತನ
ಬೆಂಗಳೂರು: ಪಲ್ಸರ್ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಶನಿವಾರ ಬೆಳಗ್ಗೆ ವೃದ್ಧೆಯೊಬ್ಬರ ಸರ ಅಪಹರಿಸಿ ಪರಾರಿಯಾಗಿದ್ದಾರೆ.
ಹುಣಸಮಾರನಹಳ್ಳಿಯ ಚಂದ್ರಮೌಳಿ ಲೇಔಟ್ ನ ನಿವಾಸಿ ಲಲಿತಾ(77) ಸರ ಕಳೆದುಕೊಂಡವರು. ಮನೆ ಮುಂದೆ ಕಸ ಗುಡಿಸುತ್ತಿದ್ದ ಲಲಿತಾ ಅವರಿಗೆ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ತೆಲುಗಿನಲ್ಲಿ ಮಾತನಾಡಿಸಿದ್ದಾರೆ. ಮಹಿಳೆ ನನಗೆ ತೆಲುಗು ಗೊತ್ತಿಲ್ಲ ಎಂದು ಮನೆ ಒಳಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಲಲಿತಾ ಅವರ ಬಾಯಿ ಮುಚ್ಚಿದ ಕಳ್ಳರು 20 ಗ್ರಾಂ ತೂಕದ ಸರವನ್ನು ಕಸಿದು ಪರಾರಿಯಾಗಿದ್ದಾರೆ.
ಜೂಜು ಅಡ್ಡೆ ಮೇಲೆ ದಾಳಿ: ಟಿ ದಾಸರಹಳ್ಳಿಯ ಪೈಪ್ಲೈನ್ ರಸ್ತೆಯಲ್ಲಿರುವ ಖಾಲಿ ನಿವೇಶನದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಪೀಣ್ಯ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಅಶ್ವಥಪ್ಪ (35), ರವಿ (42), ನಾಗರಾಜ್(36) ಮತ್ತು ಮುನಿಯಪ್ಪ(40) ಬಂಧಿತ ಆರೋಪಿಗಳು. ಬಂಧಿತರಿಂದ 25 ಸಾವಿರ ನಗದು, 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಡುಗೆ ಭಟ್ಟನ ಮೇಲೆ ಹಲ್ಲೆ : ತಡರಾತ್ರಿಯಲ್ಲಿ ಹೋಟೆಲ್ಗೆ ಬಂದ ಇಬ್ಬರು ದುಷ್ಕರ್ಮಿಗಳು ಊಟವಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಡುಗೆ ಭಟ್ಟನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಮಾರುತಿ ಸೇವಾನಗರದಲ್ಲಿರುವ ಹೋಟೆಲ್ನಲ್ಲಿ ಅಡುಗೆ ಭಟ್ಟನಾಗಿರುವ ಬಲಬನ್ ಸಿಂಗ್(24) ಹಲ್ಲೆಗೊಳಗಾದವರು. ರಾತ್ರಿ 11.30ರ ವೇಳೆ ಹೋಟೆಲ್ ಬಾಗಿಲು ಮುಚ್ಚುವಾಗ ಬಂದ ಆರೋಪಿಗಳು ಊಟ ಕೇಳಿದ್ದಾರೆ. ಊಟ ಖಾಲಿಯಾಗಿದೆ ಎಂದದ್ದಕ್ಕೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡು ಬಲಬನ್ ಸಿಂಗ್ನ ಮುಖಕ್ಕೆ ಬ್ಲೇಡ್ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

