ಬೆಂಗಳೂರು: ನಗರದಲ್ಲಿ ಇನ್ನು ಮುಂದೆ ರಸ್ತೆ ಗುಂಡಿಗಳು ಕಂಡುಬಂದರೆ ಅದಕ್ಕೆ ಸಂಬಂಧಪಟ್ಟ ಎಂಜಿನಿಯರ್ ಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮೇಯರ್ ಮಂಜುನಾಥ ರೆಡ್ಡಿ ಹೇಳಿದ್ದಾರೆ.
ಸೋಮವಾರ ಕಾರ್ಯಪಾಲಕ ಹಾಗೂ ವಲಯ ಮುಖ್ಯ ಎಂಜಿನಿಯರುಗಳ ಸಭೆಯಲ್ಲಿ ಮಾತನಾಡಿದ ಮೇಯರ್, ರಸ್ತೆ ಮೂಲಸೌಕರ್ಯ ವಿಭಾಗದಿಂದ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲಿಕ್ಕೆ ಆದೇಶ ನೀಡಲಾಗಿತ್ತು. ಆದರೂ, ಬಹುತೇಕ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ವಾರ್ಡ್ ಕಾಮಗಾರಿಗಳನ್ನು ಪ್ರಾರಂಭಿಸಲು ಜನವರಿ 29ರೊಳಗೆ ಟೆಂಡರ್ ಪೂರ್ಣಗೊಳಿಸಬೇಕು. ಕೆಲವು ವಾರ್ಡ್ ಗಳಲ್ಲಿ ಟೆಂಡರ್ ಕರೆಯುವಲ್ಲಿ ವಿಳಂಬ ಮಾಡಿದ ಎಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡರು.ಹೀಗಾಗಿ ಈ ತಿಂಗಳಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಯಬೇಕು. ಫೆಬ್ರವರಿ ಮೊದಲನೆ ವಾರದಲ್ಲಿ ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಎಲ್ಲ ವಲಯಗಳಿಗೆ ಭೇಟಿ ನೀಡಿ ಸುಮಾರು 250 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಿದ್ದಾರೆ. ಅದರಂತೆ ಕ್ರಮ ಕೈಗೊಳ್ಳಲು ಮುಖ್ಯ ಎಂಜಿನಿಯರುಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಪ್ರತಿ ಭಾಗದಲ್ಲಿ ವಾರ್ಡ್ ಮಟ್ಟದ ಕಾಮಗಾರಿಗಳನ್ನು ಪ್ರಾರಂಭಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಹಾಗೂ ಟೆಂಡರ್ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಅವರು ಇದೇ ವೇಳೆ ಮಾಹಿತಿ ಪಡೆದರು.
Advertisement