ಮಂಗಳೂರು: ಸಾಲ ತೀರಿಸಲು ಸಾಧ್ಯವಾಗದೇ ಭೂಮಿ ಕಳೆದುಕೊಂಡ ಸ್ವಾಭಿಮಾನಿ ವ್ಯಕ್ತಿಯೊಬ್ಬರು 7 ವರ್ಷದಿಂದ ಕಾಡಿನಲ್ಲಿ ವಾಸವಿದ್ದಾರೆ. ಈ ವ್ಯಕ್ತಿ ತನ್ನ ಕಾರ್ ನ್ನೇ ಮನೆಯನ್ನಾಗಿ ಪರಿವರ್ತನೆ ಮಾಡಿಕೊಂಡು ನಗರ ಪ್ರದೇಶಕ್ಕೂ ವಾಪಾಸ್ಸಾಗಲು ಇಚ್ಚಿಸದೇ ಕಾಡಿನಲ್ಲೇ ಜೀವಿಸುತ್ತಿದ್ದಾರೆ.
ಸುಳ್ಯ ತಾಲೂಕಿನ ಚಂದ್ರಶೇಖರ್ ಗೌಡ ಕಾರನ್ನೇ ತಮ್ಮ ಮನೆಯಾಗಿಸಿಕೊಂದು ಕಾಡಿನಲ್ಲಿ ವಾಸಿಸುತ್ತಿರುವ ವ್ಯಕ್ತಿಯಾಗಿದ್ದು ಆರೋಗ್ಯ ತಪಾಸಣೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದಲ್ಲಿ ವಾಸಿಸುವುದಕ್ಕೆ ಅಗತ್ಯವಿರುವ ವ್ಯವಸ್ಥೆ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಎ ವಿ ಇಬ್ರಾಹಿಂ ಭರವಸೆ ನೀಡಿದ್ದರೂ ಸಹ ಕಾಡು ಬಿಟ್ಟು ಬರಲು ಚಂದ್ರಶೇಖರ್ ಗೌಡ ಸಿದ್ಧರಿಲ್ಲ.
ಅನ್ಯರಿಂದ ಹಣದ ಸಹಾಯ ಪಡೆದು ಬದುಕುವುದಿಲ್ಲ ಎಂಬುದು ಚಂದ್ರಶೇಖರ್ ಗೌಡ ಅವರ ತತ್ವ. ಕಾರನ್ನೇ ಮನೆ ಮಾಡಿಕೊಳ್ಳುವುದಕ್ಕೂ ಮುನ್ನ ಈ ಸ್ವಾಭಿಮಾನಿ ವ್ಯಕ್ತಿಗೆ ಸುಳ್ಯ ತಾಲೂಕಿನಲ್ಲಿ 2 .29 ಎಕರೆಯಷ್ಟು ಭೂಮಿ ಹಾಗೂ ಒಂದು ಕಾರ್ ಇತ್ತು. 1999 ರಲ್ಲಿ ಸಹಕಾರ ಸಂಘದಿಂದ ೩೮,೦೦೦ ಕೃಷಿ ಸಾಲ ಪಡೆದಿದ್ದ ಚಂದ್ರಶೇಖರ್ ಗೌಡ ಅವರು ಸಾಲ ತೀರಿಸದ ಕಾರಣ ಅವರ ಭೂಮಿಯನ್ನು 1.20 ಲಕ್ಷಕ್ಕೆ ಹರಾಜು ಹಾಕಲಾಗಿತ್ತು. 2003 ರಲ್ಲಿ ಅವರ ಭೂಮಿಯಿಂದ ಅವರನ್ನು ಹೊರಹಾಕಲಾಗಿತ್ತು.
ಇದೇ ವೇಳೆ ಚಂದ್ರಶೇಖರ್ ಗೌಡ ಅವರ ಸಹೋದರ ರಾಮಚಂದ್ರ ಗೌಡ ಅವರೂ ಸಹ ಅದೇ ಸಹಕಾರ ಸಂಘದಿಂದ ಪಡೆದಿದ್ದ ಸಾಲಕ್ಕೆ ಚಂದ್ರಶೇಖರ್ ಗೌಡ ಶ್ಯೂರಿಟಿ ನೀಡಿದ್ದರು. ಅವರ ಸಹೋದರನೂ ಸಾಲ ತೀರಿಸಲು ವಿಫಲರಾಗಿದ್ದಕ್ಕೆ ಚಂದ್ರಶೇಖರ್ ಗೌಡ 80 ಸಾವಿರ ಪಾವತಿ ಮಾಡಬೇಕಾಯಿತು. ಸಧೋದರ- ಸಹೋದರಿಯರು ಇದ್ದರೂ ಅವರೊಂದಿಗೆ ಉತ್ತಮ ಸಂಬಂಧ ಇಲ್ಲದ ಕಾರಣ ಚಂದ್ರಶೇಖರ್ ಗೌಡ ಜೀವನ ಸಾಗಿಸಲು ಬುಟ್ಟಿಗಳು ನೇಯ್ಗೆ ಮಾಡುತ್ತಾ 2009 ರಿಂದ ಈ ವರೆಗೂ ಕಾಡಿನಲ್ಲೇ ವಾಸಿಸುತ್ತಿದ್ದಾರೆ.
Advertisement
Advertisement